ಚಾಮರಾಜನಗರ: ಬೆಂಗಳೂರು ಹಾಗೂ ಚೆನ್ನೈ ಪ್ರವಾಸಿಗರಿದ್ದ ಮಿನಿ ಬಸ್ ತಾಲ್ಲೂಕಿನ ಮಂಗಲ ಗ್ರಾಮದ ಬಳಿ ಬುಧವಾರ ಸಂಜೆ ಮುಗುಚಿ ಬಿದ್ದು 11 ಮಂದಿ ಗಾಯಗೊಂಡಿದ್ದಾರೆ. ಇಬ್ಬರಿಗೆ ತೀವ್ರ ಏಟಾಗಿದ್ದು, ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ಬೆಂಗಳೂರಿನ ಮೂವರಿದ್ದಾರೆ. ಅವರನ್ನುಉಮರ್ ಫಾರೂಕ್, ಫಾರಿದಾ ಮತ್ತು ಶಾಹಿನಾ ಎಂದು ಗುರುತಿಸಲಾಗಿದ್ದು, ಎಲ್ಲರೂ ಎಲೆಕ್ಟ್ರಾನಿಕ್ ಸಿಟಿ ನಿವಾಸಿಗಳು. ಉಳಿದವರೆಲ್ಲ ಚೆನ್ನೈ ನಿವಾಸಿಗಳು.
ಮಿನಿ ಬಸ್ನಲ್ಲಿ 16 ಮಂದಿ ಪ್ರಯಾಣಿಸುತ್ತಿದ್ದರು. ಚೆನ್ನೈನ ಕುಟುಂಬವೊಂದು ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದಿತ್ತು.ಅಲ್ಲಿಂದ ತಮ್ಮ ನೆಂಟರನ್ನು ಕರೆದುಕೊಂಡು ಶಿವನಸಮುದ್ರ ಹಾಗೂ ಇನ್ನಿತರ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಊಟಿಗೆ ತೆರಳುತ್ತಿತ್ತು. ಸಂಜೆ 4.30ರ ಸುಮಾರಿಗೆಮಂಗಲ ಗ್ರಾಮದ ಬಳಿ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಮಗುಚಿ ಬಿದ್ದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ತಕ್ಷಣವೇ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಮುಖಕ್ಕೆ ಹಾಗೂ ತಲೆಗೆ ಏಟಾಗಿದ್ದ ಇಬ್ಬರನ್ನು ಮೈಸೂರಿಗೆ ಕಳುಹಿಸುವಂತೆ ವೈದ್ಯರು ಸಲಹೆ ನೀಡಿದರು. ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.