ಚಾಮರಾಜನಗರ: ಕೇಂದ್ರದ ಗ್ರಾಮೀಣಾಭಿವೃದ್ದಿ ಸಚಿವಾಲಯ, ಸಂಸ್ಕೃತಿ ಸಚಿವಾಲಯದ ನಿರ್ದೇಶಕರಾದ ಅನೀಶ್. ಪಿ ರಾಜನ್ ಅವರು ಬುಧವಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನೇರಿ ಕಾಲೋನಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ನಿರ್ವಹಿಸಲಾಗಿರುವ ಕಾಫಿ ಸಸಿ ನೆಡುವ ಕಾಮಗಾರಿ ವೀಕ್ಷಿಸಿದರು. ಬಿಳಿಗಿರರಂಗನ ಬೆಟ್ಟ ವ್ಯಾಪ್ತಿಯ ಬಂಗಲೆ ಪೋಡಿಗೆ ಭೇಟಿ ಕೊಟ್ಟು ಸೋಲಿಗರ ಕುಟುಂಬಗಳಿಗೆ ಕಲ್ಪಿಸಿರುವ ಸೋಕ್ಫಿಟ್ ಕಾಮಗಾರಿ ಪರಿಶೀಲಿಸಿದರು. ಔಷಧಿಯ ಸಸ್ಯಗಳು, ಇತರೆ ನರ್ಸರಿ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು.
ಅಮೃತ ಸರೋವರ ಕಾರ್ಯಕ್ರಮದಡಿ ಯಳಂದೂರು ತಾಲ್ಲೂಕಿನ ಗುಂಬಳ್ಳಿಯ ಅಪಲಕಟ್ಟೆಯಲ್ಲಿ ನಿರ್ವಹಿಸಲಾಗಿರುವ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಪಂಚಾಯಿತಿಗೊಳಪಡುವ ಪರಚಿಕಟ್ಟೆ ಕಾಮಗಾರಿ ಪರಿಶೀಲಿಸಿ ಅಲ್ಲಿಯೇ ಇದ್ದ ಕಾರ್ಮಿಕರೊಂದಿಗೆ ಸಮಾಲೋಚಿಸಿದರು.
ಹನೂರಿನ ಮಂಗಲ ಗ್ರಾಮ ಪಂಚಾಯಿತಿಯ ಕಾಳಿಂಗನ ಕೆರೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ‘ಅಂತರ್ಜಲ ಹೆಚ್ಚಳಪಡಿಸುವ ವೈಜ್ಞಾನಿಕ ಕಾಮಗಾರಿಗಳು ಜನರಿಗೆ ಉಪಯುಕ್ತವಾಗಲಿವೆ. ಇಂತಹ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.
ಅಜ್ಜೀಪುರ ಗ್ರಾಮದ ಮುನಿಗುಡಿ ಕೆರೆ ಕಾಮಗಾರಿ ಪರಿಶೀಲಿಸಿದರು. ಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಅಭಿವೃದ್ದಿಪಡಿಸಿರುವ ಕೆರೆಯನ್ನು ವೀಕ್ಷಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಸಹಾಯಕ ಯೋಜನಾಧಿಕಾರಿ ಪ್ರೇಮ್ ಕುಮಾರ್, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇದ್ದರು.