ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ಗುರಿ ಮೀರಿದ ಸಾಧನೆ ಮಾಡಿದ ಚಾಮರಾಜನಗರ

ಡಿಸೆಂಬರ್‌ ಒಳಗೆ ವಾರ್ಷಿಕ ಗುರಿ ತಲುಪಲಿರುವ ಜಿಲ್ಲಾ ಪಂಚಾಯಿತಿ, ಏಳು ತಿಂಗಳಲ್ಲಿ ₹90 ಕೋಟಿ ಖರ್ಚು
Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಯು ಈ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಗುರಿ ಮೀರಿದ ಸಾಧನೆ ಮಾಡಿದೆ.

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಗ್ರಾಮೀಣ ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದ ನರೇಗಾ ಅಡಿಯಲ್ಲಿ, ಏಪ್ರಿಲ್‌ನಿಂದ ಇಲ್ಲಿಯವರೆಗೆ 30,10,851 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ.ಏಳು ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯು ನರೇಗಾ ಅಡಿಯಲ್ಲಿ 89,866 ಕುಟುಂಬಗಳ 1,54,628 ಮಂದಿಗೆ ಕೆಲಸ ನೀಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 2020–21ನೇ ಸಾಲಿನಲ್ಲಿ ಜಿಲ್ಲೆಗೆ ನರೇಗಾ ಅಡಿಯಲ್ಲಿ 32 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿತ್ತು. ಕಳೆದ ವರ್ಷವೂ ಇಷ್ಟೇ ಗುರಿ ಇತ್ತು. ಆದರೆ, 27 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲು ಮಾತ್ರ ಸಾಧ್ಯವಾಗಿತ್ತು.ಈ ವರ್ಷ ಈಗಾಗಲೇ 30,10,851 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ 136.73ರಷ್ಟು ಪ್ರಗತಿಯಾಗಿದೆ. ನರೇಗಾ ಅನುಷ್ಠಾನದಲ್ಲಿ ಜಿಲ್ಲೆ 6ನೇ ಸ್ಥಾನದಲ್ಲಿದೆ.

ನವೆಂಬರ್‌ ತಿಂಗಳ ಅಂತ್ಯಕ್ಕೆ 22,02,001 ಮಾನವ ದಿನಗಳನ್ನು ಸೃಷ್ಟಿಸಬೇಕಿತ್ತು. ಈಗಾಗಲೇ ನಾವು ಆ ಗುರಿಯನ್ನು ದಾಟಿ ಮುನ್ನಡೆದಿದ್ದೇವೆ. ವಾರ್ಷಿಕ ಗುರಿಯನ್ನು ಡಿಸೆಂಬರ್‌ ಒಳಗಾಗಿ ತಲುಪುತ್ತೇವೆ. ಗುರಿ ತಲುಪಿದರೂ ಮುಂದೆಯೂ ಕೆಲಸ ಮಾಡಿಸುವುದಕ್ಕೆ ಅವಕಾಶ ಇದೆ ಎಂದು ನರೇಗಾ ಅನುಷ್ಠಾನದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ ಮೊದಲು: ಜಿಲ್ಲೆಯಲ್ಲಿ ನರೇಗಾ ಗುರಿ ತಲುಪುತ್ತಿರುವುದು ಇದೇ ಮೊದಲು. ಇದುವರೆಗೆ 27 ಲಕ್ಷ ಮಾನವ ದಿನಗಳನ್ನು (ಕಳೆದ ವರ್ಷ) ಸೃಷ್ಟಿಸಿದ್ದು ದಾಖಲೆಯಾಗಿತ್ತು. ವರ್ಷದಿಂದ ವರ್ಷಕ್ಕೆ ನರೇಗಾವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

₹93 ಕೋಟಿ ವೆಚ್ಚ: ಈ ವರ್ಷ ನರೇಗಾ ಅಡಿಯಲ್ಲಿ ₹160 ಕೋಟಿ ವೆಚ್ಚಮಾಡಲು ಗುರಿ ನೀಡಲಾಗಿದ್ದು, ಕಾರ್ಮಿಕರ ವೇತನ ಹಾಗೂ ಸಲಕರಣೆಗಳಿಗಾಗಿ ಈಗಾಗಲೇ ₹93 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ಕೆಲವು ಬಿಲ್‌ಗಳು ಪಾವತಿ ಬಾಕಿ ಇವೆ. ಮಾರ್ಚ್‌ ಅಂತ್ಯದ ವೇಳೆಗೆ ವೆಚ್ಚದ ಗುರಿಯೂ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ನರೇಗಾ ಉದ್ಯೋಗ ಚೀಟಿ ಹೊಂದಿರುವವರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸ ನೀಡುವುದು ಕಡ್ಡಾಯ. ಈ ವರ್ಷ ಕೂಲಿಯನ್ನು ಹೆಚ್ಚಿಸಲಾಗಿದ್ದು ದಿನಕ್ಕೆ ₹275 ನಿಗದಿ ಪಡಿಸಲಾಗಿದೆ. ಪ್ರತಿ ವಾರ ಕಾರ್ಮಿಕರ ಖಾತೆಗೆ ಹಣ ನೇರವಾಗಿ ಜಮೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಈವರೆಗೆ 2.04 ಲಕ್ಷ ಕುಟುಂಬಗಳ 4.79 ಲಕ್ಷ ಮಂದಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಈ ಪೈಕಿ 89,866 ಕುಟುಂಬಗಳ 1.54 ಲಕ್ಷ ಕಾರ್ಮಿಕರು ಈ ವರ್ಷ ಕೆಲಸ ಮಾಡಿದ್ದಾರೆ.2019–20ನೇ ಸಾಲಿನಲ್ಲಿ ಹೊಸದಾಗಿ 33,651 ಕುಟುಂಬಗಳ 69,667 ಮಂದಿಗೆ ಉದ್ಯೋಗ ಚೀಟಿ ನೀಡಲಾಗಿದೆ.

ಹೆಚ್ಚಿದ ದುರ್ಬಲ ವರ್ಗದವರ ಭಾಗಿದಾರಿಕೆ: ಎರಡು ವರ್ಷಗಳಿಂದೀಚೆಗೆ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಜನರು ನರೇಗಾ ಯೋಜನೆಯ ಲಾಭ ಪಡೆಯುವುದು ಹೆಚ್ಚುತ್ತಿದೆ. ಈ ಏಳು ತಿಂಗಳಲ್ಲಿ ಸೃಷ್ಟಿಸಲಾಗಿರುವ ಒಟ್ಟು ಮಾನವ ದಿನಗಳಲ್ಲಿ ಪರಿಶಿಷ್ಟ ಜಾತಿಯ ಕಾರ್ಡ್‌ದಾರರು ಶೇ 27.14ರಷ್ಟು ಮಾನವ ದಿನಗಳನ್ನು ಸೃಷ್ಟಿಸಿದ್ದಾರೆ. ಕಳೆದ ಇಡೀ ವರ್ಷ ಈ ಪ್ರಮಾಣ ಶೇ 24ರಷ್ಟಿತ್ತು. ಅದೇ ರೀತಿ ಪರಿಶಿಷ್ಟ ಪಂಗಡಗಳಿಗೆ ಸೇರಿದ ಉದ್ಯೋಗ ಚೀಟಿದಾರರು ಶೇ 9.68ರಷ್ಟು ಮಾನವ ದಿನಗಳನ್ನು ಸೃಷ್ಟಿಸಿದ್ದಾರೆ. ಹೋದ ವರ್ಷ ಶೇ 9.13 ಇತ್ತು. ಈ ಬಾರಿ 630 ಅಂಗವಿಕಲರು ನರೇಗಾ ಕೆಲಸದಲ್ಲಿ ತೊಡಗಿದ್ದಾರೆ.

ಜಲ ಸಂರಕ್ಷಣೆಗೆ ಒತ್ತು: ಜಿಲ್ಲಾ ಪಂಚಾಯಿತಿಯು ಈ ವರ್ಷ ಜಲ ಸಂರಕ್ಷಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕೆರೆಗಳಲ್ಲಿ ಇಂಗು ಗುಂಡಿ ನಿರ್ಮಾಣ, ಬದುಗಳ ದುರಸ್ತಿ, ಕಾಲುವೆ ದುರಸ್ತಿ ಮುಂತಾದ ಕೆಲಸಗಳಿಗೆ ಹೆಚ್ಚು ಒತ್ತು ನೀಡಿತ್ತು.

ನರೇಗಾವನ್ನೇ ಆಧಾರವಾಗಿಟ್ಟುಕೊಂಡು 21 ಮಾದರಿ ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೂ ಜಿಲ್ಲಾ ಪಂಚಾಯಿತಿ ಚಾಲನೆ ನೀಡಿದೆ. ಶಾಲೆಗಳಲ್ಲಿ ಮಾದರಿ ಆಟದ ಮೈದಾನ ನಿರ್ಮಾಣ ಕಾರ್ಯಕ್ಕೂ ಕೈಹಾಕಿದೆ.

ಬಚ್ಚಲು ಗುಂಡಿ ನಿರ್ಮಾಣ:ಸದ್ಯ ಗ್ರಾಮೀಣ ಭಾಗಗಳಲ್ಲಿ ನರೇಗಾ ಫಲಾನುಭವಿಗಳ ಮನೆಗಳಲ್ಲಿ ಬಚ್ಚಲು ಗುಂಡಿಗಳನ್ನು (ಸೋಕ್‌ ಪಿಟ್‌) ನಿರ್ಮಿಸಲು ಜಿಲ್ಲಾ ಪಂಚಾಯಿತಿ ಆದ್ಯಾತೆ ನೀಡುತ್ತಿದೆ. ಗುಂಡಿ ನಿರ್ಮಾಣಕ್ಕೆ ₹14 ಸಾವಿರ ಸಹಾಯಧನವನ್ನೂ ನೀಡುತ್ತಿದೆ.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ 50 ಬಚ್ಚಲು ಗುಂಡಿಗಳನ್ನು ನಿರ್ಮಿಸುವಂತೆ ಸೂಚನೆ ನೀಡಿದೆ. ಜಿಲ್ಲೆಗೆ 6,500 ಗುಂಡಿಗಳನ್ನು ನಿರ್ಮಿಸಲು ಗುರಿ ನೀಡಿದೆ. ಜಿಲ್ಲೆಯಲ್ಲಿ 11,141 ಬಚ್ಚಲು ಗುಂಡಿಗಳನ್ನು ನಿರ್ಮಿಸಲು ಕಾರ್ಯಾದೇಶ ನೀಡಲಾಗಿದೆ. 8,500ದಷ್ಟು ಗುಂಡಿಗಳ ನಿರ್ಮಾಣ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪಂಚಾಯಿತಿಯ ನರೇಗಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನವೀನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಮ ಉಲ್ಲಂಘನೆಯ ಆರೋಪ

ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಅನುಷ್ಠಾನ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪಗಳೂ ಇವೆ. ಕಾರ್ಮಿಕರು ಮಾಡಬೇಕಾದ ಕೆಲಸವನ್ನು ಜೆಸಿಬಿ ಹಾಗೂ ಇತರೆ ಯಂತ್ರಗಳ ಮೂಲಕ ಮಾಡಿಸಲಾಗುತ್ತಿದೆ. ಫಲಾನುಭವಿಗಳಿಗೆ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಇವೆ.

‘ಕನಿಷ್ಠ 100 ದಿನಗಳು ಕೆಲಸ ಕೊಡಬೇಕು ಎಂಬ ನಿಯಮ ಇದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕೆಲಸ ಕೊಟ್ಟಿದ್ದರು. ಆದರೆ, ಅನ್‌ಲಾಕ್‌ ಆದ ನಂತರ ಉದ್ಯೋಗ ಚೀಟಿ ಹೊಂದಿರುವವರಿಗೆ ಕೆಲಸ ನೀಡುತ್ತಿಲ್ಲ’ ಎಂದು ಕೆಲ್ಲಂಬಳ್ಳಿ ಗ್ರಾಮದ ಮಹೇಶ್‌ ಅವರು ಆರೋಪಿಸಿದರು.

ಅಗತ್ಯವಿರುವವರಿಗೆ ಕೆಲಸ ನೀಡಲು ಒತ್ತು: ಸಿಇಒ

‘ಈ ಬಾರಿ ಜಿಲ್ಲೆಯಲ್ಲಿ ನರೇಗಾವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಕ್ರಮ ಕೈಗೊಂಡಿದ್ದೇವೆ. ಹಾಗಾಗಿ, ಗುರಿ ತಲುಪಲು ಸಾಧ್ಯವಾಗಿದೆ. ಗುರಿ ಎಂಬುದು ಕೇವಲ ತಾತ್ಕಾಲಿಕ. ಎಷ್ಟು ಮಾನವ ದಿನಗಳನ್ನು ಬೇಕಾದರೂ ಸೃಷ್ಟಿಸಬಹುದು. ಗ್ರಾಮೀಣ ಭಾಗದ ಜನರಿಗೆ ಬೇಡಿಕೆ ಆಧಾರದಲ್ಲಿ ಕೆಲಸ ಕೊಡುವುದು ಈ ಯೋಜನೆಯ ಉದ್ದೇಶ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಕಾರಣದಿಂದ ಬಡವರು ತುಂಬಾ ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ನರೇಗಾದಿಂದ ಅನುಕೂಲವಾಗಿದೆ. ಯಾರಿಗೆ ಅಗತ್ಯವಿದೆಯೋ ಅವರಿಗೆ ಉದ್ಯೋಗ ಚೀಟಿ ನೀಡಿ, ಕೆಲಸ ನೀಡುವಂತೆ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೆಸಿಬಿ ಅಥವಾ ಇನ್ಯಾವುದೇ ಯಂತ್ರಗಳಿಂದ ಕೆಲಸ ಮಾಡಿಸಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT