ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಜಿಲ್ಲೆಯ ಅಭಿವೃದ್ಧಿ ಹರಿಕಾರ: ಸಿ.ಪುಟ್ಟರಂಗಶೆಟ್ಟಿ

Published 12 ಮಾರ್ಚ್ 2024, 7:39 IST
Last Updated 12 ಮಾರ್ಚ್ 2024, 7:39 IST
ಅಕ್ಷರ ಗಾತ್ರ

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್‌.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಆಚರಿಸಿದರು. 

ಆರ್‌.ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಷನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಶಾಸಕರು ಮತ್ತು ಸಂಸದರಾಗಿದ್ದಾಗ ಜಿಲ್ಲೆಗೆ ಅವರು ನೀಡಿದ್ದ ಕೊಡುಗೆಗಳನ್ನು ಸ್ಮರಿಸಿದರು. 

ನಗರದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯುಕ್ರಮದಲ್ಲಿ ಶಾಸಕ, ಎಂಎಸ್‌ಐಎಲ್‌ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅವರು ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. 

ನಂತರ ಮಾತನಾಡಿದ ಅವರು, ‘ಧ್ರುವನಾರಾಯಣ ಅವರು ಅಭಿವೃದ್ಧಿಯ ಹರಿಕಾರರಾಗಿದ್ದರು. ರಾಜಕಾರಣಿ ಯಾವ ರೀತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು. ‌ಜನರೊಂದಿಗೆ ಬೆರೆಯುವುದು, ಸೌಜನ್ಯದಿಂದ ವರ್ತಿಸುತ್ತಿದ್ದ ರೀತಿ ಸೇರಿದಂತೆ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಅವರಿಂದ ಕಲಿತಿದ್ದೇವೆ. ಎರಡು ಬಾರಿ ಶಾಸಕರಾಗಿ, ಸಂಸದರಾಗಿ ಉತ್ತಮ ಕಾರ್ಯವನ್ನು ಮಾಡುವ ಜೊತೆಗೆ ಜಿಲ್ಲೆಗೆ ಶಾಶ್ವತವಾದ ಯೋಜನೆಗಳನ್ನು ತಂದಿದ್ದರು’ ಎಂದು ಸ್ಮರಿಸಿದರು. 

‘ಕೇಂದ್ರದ ಅನುದಾನ ಬಳಸಿಕೊಳ್ಳುವುದರಲ್ಲಿ ಅವರು ಸಿದ್ದಹಸ್ತರಾಗಿದ್ದರು. ದೆಹಲಿ ಮಟ್ಟದಲ್ಲಿ ಪ್ರಭಾವ ಬೆಳೆಸಿ, ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ, ಕ್ಷೇತ್ರಕ್ಕೆ ಪ್ರಮುಖ ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು, ಸಂಪರ್ಕ ರಸ್ತೆಗಳು, ಕೇಂದ್ರಿಯ ವಿದ್ಯಾಲಯ, ಕೃಷಿ ಕಾಲೇಜು, ವೈದ್ಯಕೀಯ ಕಾಲೇಜು, ಏಕಲವ್ಯ ಶಾಲೆ ಸೇರಿದಂತೆ ಹತ್ತಾರು ಹೊಸ ಯೋಜನೆಗಳನ್ನು ತಂದಿದ್ದರು. ಅವರು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು’ ಎಂದು ಹೇಳಿದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಅತ್ಯುತ್ತಮ ಸಂಸದರಾಗಿ ಹೆಸರು ಮಾಡಿದ್ದ ಧ್ರುವನಾರಾಯಣ ನಮ್ಮ ನಾಯಕರು ಎಂದು ಹೇಳಿಕೊಳ್ಳುವುದೇ ಹೆಮ್ಮೆ. ಅವರೊಂದಿಗಿನ ಒಡನಾಟ ಮತ್ತು ಸ್ನೇಹ ಚಿರಸ್ಮರಣೀಯ. ಇಂದು ಕಾಡಾ ಅಧ್ಯಕ್ಷಗಿರಿ ಹುದ್ದೆ ನನಗೆ ಸಿಕ್ಕದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಧ್ರುವನಾರಾಯಣ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸದಾಶಿವಮೂರ್ತಿ, ಕಾಗಲವಾಡಿ ಚಂದ್ರು, ಸೈಯದ್ ರಫಿ, ಸಿ.ಎ.ಮಹದೇವಶೆಟ್ಟಿ, ಮುಖಂಡರಾದ ಆಲೂರು ಪ್ರದೀಪ್, ಸುಹೇಲ್ ಆಲಿ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಜತ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ನಾಗಶ್ರೀ, ಮಾದಲಾಂಬಿಕೆ ಇತರರು ಭಾಗವಹಿಸಿದ್ದರು. 

ರಾಮಸಮುದ್ರದಲ್ಲಿ ಸ್ಮರಣೆ: ನಗರದ ರಾಮಸಮುದ್ರದಲ್ಲಿ ಧ್ರುವನಾರಾಯಣ ಅಭಿಮಾನಿಗಳ ಬಳಗ ಹಾಗೂ ಚೇತನ ಕಲಾವಾಹಿನಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಯಜಮಾನರಾದ ನಾಗರಾಜು, ಪಾಪಯ್ಯ, ಆಂಜನೇಯ, ಶಿವರಾಜು, ಬಸವರಾಜು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ. ರಾಜಪ್ಪ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮುಖಂಡರಾದ ಚನ್ನಂಜಯ್ಯ, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಮೋಹನ್ ನಗು, ಸ್ವಾಮಿ, ಅಕ್ಷಯ್, ಕಾರಯ್ಯ, ನಾಗಶ್ರೀ ಭಾಗವಹಿಸಿದ್ದರು. 

ನಗರದ ಚಾಮರಾಜೇಶ್ವರ ಉದ್ಯಾನದ ಬಳಿಯಲ್ಲೂ ಅಭಿಮಾನಿಗಳು ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗ್ರಾಮೀಣ ಭಾಗಗಳಲ್ಲೂ ಶ್ರದ್ಧಾಂಜಲಿ

ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಗ್ರಾಮೀಣ ಭಾಗಗಳಲ್ಲೂ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 

ತಾಲ್ಲೂಕಿನ ಕಾಗಲವಾಡಿಯ ಬಸ್‌ ನಿಲ್ದಾಣ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ‘ಜಿಲ್ಲೆಯ ಅಭಿವೃದ್ಧಿಗೆ ಧ್ರುವನಾರಾಯಣರರ ಕೊಡುಗೆ ಅಪಾರವಾಗಿದೆ’ ಎಂದರು. 

‘ಅವರು ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಗಲವಾಡಿ ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆ ಮಾಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದರು. ಕಾರ್ಯಕರ್ತರ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದರು’ ಎಂದರು.

ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಕಾಗಲವಾಡಿಚಂದ್ರು, ಮುಖಂಡ ಮರಿಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಬಾಬು, ಪೋಸ್ಟ್ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಫಾಜಿಲ್ ಪಾಷ, ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಸುರೇಶ್, ಜಯಶಂಕರಮೂರ್ತಿ, ಗುಂಡಣ್ಣ, ಮಹದೇವಸ್ವಾಮಿ, ರವಿ ಬಂಗಾರು, ಲಿಂಗರಾಜು,ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT