ಚಾಮರಾಜನಗರ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿಗೆ 1.110 ಕೆಜಿ ತೂಕದ ಬೆಳ್ಳಿಯ ಮೂರು ಕಣ್ಣುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಅವರು ಭಕ್ತರೊಬ್ಬರ ಮೂಲಕ ಶುಕ್ರವಾರ ಕಾಣಿಕೆಯನ್ನು ದೇವಾಲಯಕ್ಕೆ ಅರ್ಪಿಸಿದ್ದಾರೆ.
ಶನಿವಾರ ಮಲೆಮಹದೇಶ್ವರ ಸ್ವಾಮಿಗೆ ಬೆಳ್ಳಿ ಕಣ್ಣನ್ನು ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಶನಿವಾರ ಬೆಂಗಳೂರಿನಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿ ಅಭಿನಂದನೆ ಪತ್ರ ನೀಡಿದ್ದಾರೆ.
ಮಲೆ ಮಹದೇಶ್ವರ ಸ್ವಾಮಿಯು ಎಸ್.ಎಂ.ಕೃಷ್ಣ ಅವರ ಮನೆ ದೇವರಾಗಿದ್ದು, ಮುಖ್ಯಮಂತ್ರಿಯಾಗಿದ್ದಾಗ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದರು.
ಇತ್ತೀಚೆಗೆ ನಡೆದ ಮೊಮ್ಮಗನ ಮದುವೆ ಬಳಿಕ ಈಗ ಬೆಳ್ಳಿ ಕಣ್ಣಿನ ಕಾಣಿಕೆ ನೀಡಿದ್ದಾರೆ.