ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ತೆಂಗಿನ ಧಾರಣೆ ಕುಸಿತ, ಬೆಳೆಗಾರರು ಕಂಗಾಲು

ನಾಲ್ಕು ತಿಂಗಳಿಂದ ಸತತ ಕುಸಿತ, ತಮಿಳುನಾಡಿನಲ್ಲಿ ಇಲ್ಲ ಬೇಡಿಕೆ
Published 11 ಜುಲೈ 2023, 12:59 IST
Last Updated 11 ಜುಲೈ 2023, 12:59 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ತೆಂಗಿನಕಾಯಿ ಧಾರಣೆ ಗಣನೀಯವಾಗಿ ಕುಸಿದಿದ್ದು, ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. 

ವ್ಯಾಪಾರಿಗಳು ಕೆಜಿ ತೆಂಗಿನಕಾಯಿ ₹17–₹18ಕ್ಕೆ ತೆಂಗು ಬೆಳಗಾರರಿಂದ ಖರೀದಿಸುತ್ತಿದ್ದಾರೆ. ಎಪಿಎಂಸಿಗಳಲ್ಲೂ ಇದೇ ಬೆಲೆ ಇದೆ. ಸಗಟು ದರದಲ್ಲಿ ಒಂದು ತೆಂಗಿನಕಾಯಿ ₹12ರಿಂದ ₹15ಕ್ಕೆ ಮಾರಾಟವಾಗುತ್ತಿದೆ. ಅಂಗಡಿಗಳಲ್ಲಿ ₹18ರಿಂದ ₹25ರವರೆಗೂ ಬೆಲೆ ಹೇಳುತ್ತಿದ್ದಾರೆ. 

ವಾರದ ಹಿಂದೆ ಒಂದು ಕೆಜಿ ತೆಂಗಿನಕಾಯಿಗೆ ₹22–₹24ರವರೆಗೆ ಬೆಲೆ ಇತ್ತು. ದಿಢೀರ್‌ ಆಗಿ ನಾಲ್ಕೈದು ರೂಪಾಯಿ ಕುಸಿದಿರುವುದು ಬೆಳೆಗಾರರನ್ನು ಕಳವಳಕ್ಕೀಡುಮಾಡಿದೆ. 

ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗನ್ನು ಬೆಳೆಯಲಾಗುತ್ತದೆ. ಈ ಪೈಕಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಹೆಚ್ಚಿನ ರೈತರು ತೆಂಗು ಬೆಳೆಯುತ್ತಿದ್ದಾರೆ. 

ಸತತ ಬೆಲೆ ಕುಸಿತ: 2021ರ ಅಂತ್ಯದಲ್ಲಿ ತೆಂಗಿನ ಬೆಲೆ ₹40ರವರೆಗೆ ಹೋಗಿತ್ತು. ಕಳೆದ ವರ್ಷವೂ ಮುಂಗಾರು ಅವಧಿಯಲ್ಲಿ ಬೆಲೆಯಲ್ಲಿ ಭಾರಿ ಕುಸಿತವಾಗಿತ್ತು. ಅಕ್ಟೋಬರ್‌ ಸಮಯದಲ್ಲಿ ಕೆಜಿಗೆ ₹20 ಆಸುಪಾಸಿನಲ್ಲಿತ್ತು. ಡಿಸೆಂಬರ್‌ ವೇಳೆಗೆ ಧಾರಣೆ ಚೇತರಿಕೆ ಕಂಡಿತ್ತು. ₹30ರಿಂದ ₹32ಕ್ಕೆ ಬೆಳೆಗಾರರು ಮಾರಾಟ ಮಾಡಿದ್ದರು. 

ವರ್ಷಾರಂಭದ ನಂತರ ಧಾರಣೆ ಹಂತ ಹಂತವಾಗಿ ಕುಸಿಯುತ್ತಾ ಬಂದಿದೆ ಎಂದು ಹೇಳುತ್ತಾರೆ ಬೆಳೆಗಾರರು. 

‘ಕಳೆದ ವರ್ಷದ ಡಿಸೆಂಬರ್‌ ವೇಳೆಗೆ ₹30ರಿಂದ ₹32 ಇತ್ತು. ಜನವರಿಯಿಂದ ಧಾರಣೆ ಇಳಿಕೆಯಾಗುತ್ತಾ ಬಂದಿದೆ. ₹28, ₹26, ₹24, ₹22... ಹೀಗೆ ಇಳಿದು ಈಗ ₹18–₹17ಕ್ಕೆ ತಲುಪಿದೆ’ ಎಂದು ಚಾಮರಾಜನಗರ ತಾಲ್ಲೂಕಿನ ಅಂಕನಶೆಟ್ಟಿಪುರದ ಬೆಳೆಗಾರ ಸತೀಶ್‌ ಹೇಳಿದರು. 

‘ನಮ್ಮಲ್ಲಿ ಬೆಳೆದ ತೆಂಗಿನಕಾಯಿ ತಮಿಳುನಾಡಿಗೆ ಹೋಗುತ್ತಿತ್ತು. ಅಲ್ಲಿನ ವ್ಯಾಪಾರಿಗಳು ಉತ್ತಮ ಬೆಲೆ ಕೊಟ್ಟು ಖರೀದಿ ಮಾಡುತ್ತಿದ್ದರು. ಇಲ್ಲವೇ ಸ್ಥಳೀಯ ವ್ಯಾಪಾರಿಗಳು ಇಲ್ಲಿ ಖರೀದಿಸಿ ಅಲ್ಲಿಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಮ್ಮ ತೆಂಗಿನಕಾಯಿಗಳನ್ನು ಖರೀದಿ ಮಾಡಲಾಗುತ್ತಿಲ್ಲ. ಖಾದ್ಯ ತೈಲಗಳಿಗೆ ಬೆಲೆ ಇಳಿದಾಗ, ನಮ್ಮ ಉತ್ಪನ್ನಗಳಿಗೂ ಇಳಿಯುತ್ತಿದೆ’ ಎಂದು ಅವರು ಹೇಳಿದರು.  

‘ವರ್ಷಕ್ಕೆ ಎರಡು, ಇಲ್ಲವೇ ಮೂರು ಬಾರಿ ತೆಂಗಿನಕಾಯಿ ಕಟಾವು ಮಾಡಲಾಗುತ್ತದೆ. ನಮ್ಮಲ್ಲಿ ಕಟಾವು ಆಗಿದೆ. ಅಷ್ಟೊತ್ತಿಗೆ ಬೆಲೆ ಕಡಿಮೆಯಾಗಿದೆ. ಹಾಗಾಗಿ, ಮಾರಾಟ ಮಾಡಿಲ್ಲ. ಈಗ ಕೊಟ್ಟರೆ ಖರ್ಚೂ ಬರುವುದಿಲ್ಲ’ ಎಂದು ಮತ್ತೊಬ್ಬ ತೆಂಗು ಬೆಳೆಗಾರ, ತಾಲ್ಲೂಕಿನ ಬಂದೀಗೌಡನಹಳ್ಳಿಯ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೊಳ್ಳೇಗಾಲದ ಆರ್‌ಎಂಸಿಯ ಮಳಿಗೆಯೊಂದರಲ್ಲಿ ಜೋಡಿಸಿಟ್ಟಿದ್ದ ತೆಂಗಿನಕಾಯಿಗಳು
ಕೊಳ್ಳೇಗಾಲದ ಆರ್‌ಎಂಸಿಯ ಮಳಿಗೆಯೊಂದರಲ್ಲಿ ಜೋಡಿಸಿಟ್ಟಿದ್ದ ತೆಂಗಿನಕಾಯಿಗಳು

ಬೆಂಬಲ ಬೆಲೆಗೆ ಆಗ್ರಹ

ಒಂದು ತೆಂಗಿನ ಮರ ಏರಿ ಕಾಯಿ ಕೀಳಲು ಮರ ಏರುವವರು ₹30 ಕೇಳುತ್ತಾರೆ. ಮರದಲ್ಲಿ ಐದು ತೆಂಗಿನಕಾಯಿ ಇರಲಿ 50 ಬೇಕಾದರೂ ಇರಲಿ ₹30 ಕೊಡಲೇಬೇಕು. ತೆಂಗಿನ ಕಾಯಿ ಕಟಾವು ಸಾಗಣೆ ಸಿಪ್ಪೆ ತೆಗೆಯುವುದಕ್ಕೆ ಒಂದು ತೆಂಗಿನಕಾಯಿಗೆ ₹3ರಿಂದ ₹4  ವೆಚ್ಚವಾಗುತ್ತಿದೆ. ಮೊದಲು ಸಿಪ್ಪೆಗೆ ಬೇಡಿಕೆ ಇತ್ತು. ಈಗ ಅದನ್ನು ಖರೀದಿಸುವವರು ಕಡಿಮೆಯಾಗಿದ್ದಾರೆ. ಈಗಿನ ಬೆಲೆಗೆ ಮಾರಾಟ ಮಾಡಿದರೆ ನಾವು ಮಾಡಿದ ಖರ್ಚು ಬರುವುದಿಲ್ಲ. ನಷ್ಟ ಖಚಿತ’ ಎಂದು ಬೆಳೆಗಾರ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸರ್ಕಾರಗಳು ತೆಂಗು ಬೆಳೆಗಾರರನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಬೆಲೆ ಕುಸಿದಿರುವುದರಿಂದ ಸರ್ಕಾರ ಬೆಂಬಲ ಬೆಲೆಯ ಅಡಿಯಲ್ಲಿ ತೆಂಗು ಖರೀದಿಸಲು ಕ್ರಮ ಕೈಗೊಳ್ಳಬೇಕು. 2012–13ರಲ್ಲಿ ಕೆಜಿ ತೆಂಗಿಗೆ ₹9 ಇದ್ದ ಸಂದರ್ಭದಲ್ಲಿ ಸರ್ಕಾರ ₹14 ಬೆಂಬಲ ಬೆಲೆ ಘೋಷಿಸಿ ಎಪಿಎಂಸಿ ಮೂಲಕ ಖರೀದಿಸಿತ್ತು. 2016–17ನೇ ಸಾಲಿನಲ್ಲಿ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ಮಾರಾಟ ಮಹಾಮಂಡಲ ಮೂಲಕ ಕೆಜಿಗೆ ₹16 ನಿಗದಿ ಮಾಡಿ ಖರೀದಿಸಿತ್ತು. ಅದೇ ರೀತಿ ಈ ಬಾರಿಯೂ ಸರ್ಕಾರ ಬೆಳೆಗಾರರ ಹಿತ ಕಾಪಾಡಬೇಕು’ ಎಂದು ರವಿಕುಮಾರ್ ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT