ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಕೃಷಿ: ಕಾಡೊಳಗೆ ಬೆಳೆ ವೈವಿಧ್ಯ-ತುಳಸಿಕೆರೆ ಗ್ರಾಮದಲ್ಲಿ ಪ್ರಯೋಗ

ಚಾಮರಾಜನಗರ: ಮಹದೇಶ್ವರ ಬೆಟ್ಟ ವನ್ಯಧಾಮದ ತುಳಸಿಕೆರೆ ಗ್ರಾಮದಲ್ಲಿ ಪ್ರಯೋಗ
Last Updated 16 ಸೆಪ್ಟೆಂಬರ್ 2021, 21:15 IST
ಅಕ್ಷರ ಗಾತ್ರ

ಹನೂರು: ಮಾನವ–ವನ್ಯಜೀವಿ ಸಂಘರ್ಷ ತಡೆ, ಪರಿಸರ ಸಂರಕ್ಷಣೆ ಹಾಗೂ ಅರಣ್ಯದಲ್ಲಿ ವಾಸಿಸುವ ಜನರ ಕಾಡಿನ ಉತ್ಪನ್ನಗಳ ಮೇಲಿನ ಅವಲಂಬನೆ ತಗ್ಗಿಸುವ ಉದ್ದೇಶದಿಂದ ಮಲೆ ಮಹದೇಶ್ವರ ವನ್ಯಧಾಮದ ಗ್ರಾಮವೊಂದರಲ್ಲಿ ಜಾರಿಗೆ ಬಂದಿರುವ ಸಮುದಾಯ ಕೃಷಿ ಪ್ರಯೋಗ ಯಶಸ್ಸಿನತ್ತ ಸಾಗಿದೆ.

ವನ್ಯಧಾಮದ ಒಳಗಿರುವ ತುಳಸಿಕೆರೆ ಗ್ರಾಮದಲ್ಲಿ ಅರಣ್ಯ ಇಲಾಖೆ, ಅಮೃತಭೂಮಿ, ರೈತ ಸಂಘ ಹಾಗೂ ರಾಜ್ಯ ರೈತ ಮಹಿಳಾ ಒಕ್ಕೂಟಗಳ ಸಹಭಾಗಿತ್ವದಲ್ಲಿ ಕಳೆದ ವರ್ಷ ಸಮುದಾಯ ಸಾವಯವ ಕೃಷಿ ಪ್ರಯೋಗ ಆರಂಭಿಸಲಾಗಿತ್ತು.

ವರ್ಷಕ್ಕೆ ಎರಡು ಕ್ವಿಂಟಲ್ ರಾಗಿ, ಅವರೆ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದ ಭೂಮಿಯಲ್ಲಿ ಈಗ ವೈವಿಧ್ಯಮಯ ಬೆಳೆ ಬೆಳೆಸಲಾಗುತ್ತಿದೆ. ಹನಿ ನೀರಾವರಿ ಆಶ್ರಯದಲ್ಲಿ ಬೆಳೆಯುತ್ತಿರುವ ವಿವಿಧ ಫಸಲು ಸ್ಥಳೀಯ ರೈತರಲ್ಲಿ ಆಶಾಭಾವನೆ ಮೂಡಿಸಿವೆ.

ಸಮುದಾಯದ ಕೃಷಿಗಾಗಿ ಸ್ಥಳೀಯ ರೈತರಿಂದ 10 ಎಕರೆ ಜಮೀನು ಗುತ್ತಿಗೆಗೆ ಪಡೆಯಲಾಗಿತ್ತು. ನೀರಿನ ಕೊರತೆ ಇದ್ದ ಕಾರಣ, ಸದ್ಯ ಐದು ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. 10 ರೈತ ಕುಟುಂಬಗಳು ಬೇಸಾಯದಲ್ಲಿ ತೊಡಗಿವೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ, ಅರಿಸಿನ, ವಿವಿಧ ಸೊಪ್ಪು ಸೇರಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಗ್ರಾಮದಲ್ಲಿ ಹರಿಯುತ್ತಿದ್ದ ತೊರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಚೆಕ್‌ಡ್ಯಾಂ ನಿರ್ಮಿಸಿ, ನೀರನ್ನು ಸಂಗ್ರಹಿಸಲಾಗುತ್ತಿದೆ. ಸೋಲಾರ್‌ ಪಂಪ್‌ ವ್ಯವಸ್ಥೆ ಮಾಡಲಾಗಿದೆ.

‘ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡಲಾಗುತ್ತಿದೆ. ಬೆಳೆಗಳು ಚೆನ್ನಾಗಿ ಬಂದಿವೆ’ ಎಂದು ಗ್ರಾಮದ ರೈತ ನಾಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲ್ಲುಗಾವಲು: ‘10 ಎಕರೆ ಪೈಕಿ 1 ಎಕರೆಯಲ್ಲಿ ಹುಲ್ಲುಗಾವಲು ಮಾಡಲಾಗುತ್ತಿದೆ. ಅರಣ್ಯ ಇಲಾಖೆಯು ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ. ಜಾನುವಾರುಗಳು ಕಾಡಿಗೆ ಹೋಗುವುದನ್ನು ತಡೆಗಟ್ಟುವುದಕ್ಕೆ ಈ ಯೋಜನೆ. ಹಸುಗಳ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ನೀರಿನ ಕೊರತೆ ಇದ್ದರೂ ಅಲ್ಪ ನೀರಿನಲ್ಲೇ ಕೃಷಿ ಮಾಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಇದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹೇಳಿದರು.

‘ಪರಿಸರ ಸಂರಕ್ಷಣೆ, ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಜನರು ಕಾಡಿನಲ್ಲಿ ಜಾನುವಾರು ಮೇಯಿಸುವುದನ್ನು ತಡೆಯಲು ಹುಲ್ಲು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ರೈತರಿಗೆ ಬೇಕಾದ ಎಲ್ಲ ಸಹಕಾರವನ್ನೂ ನೀಡುತ್ತಿದ್ದೇವೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ತಿಳಿಸಿದರು.

---

ರೈತರು ಹಲವು ಬೆಳೆ ಬೆಳೆಯುತ್ತಿದ್ದಾರೆ. ಕೃಷಿಗೆ ನೀರನ್ನು ಪೂರೈಸುವುದಕ್ಕಾಗಿ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ₹ 7 ಲಕ್ಷ ವೆಚ್ಚದಲ್ಲಿ ಸೋಲಾರ್ ಪಂಪ್ ವ್ಯವಸ್ಥೆ ಕಲ್ಪಿಸಲಾಗಿದೆ
ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

----

ತುಳಸಿಕೆರೆ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದೇವೆ. 10 ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಾರಾಟ ಮಾಡುವ ಯೋಚನೆ ಇದೆ
ಹೊನ್ನೂರು ಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT