ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಪಕ್ಷಕ್ಕೆ ಸಮುದಾಯ ಅಡ ಇಡಬೇಡಿ: ಶ್ರೀನಿವಾಸ ನಾಯಕ

ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್‌ನ ಪು.ಶ್ರೀನಿವಾಸ ನಾಯಕ ಆಕ್ಷೇಪ
Published 23 ಏಪ್ರಿಲ್ 2024, 4:45 IST
Last Updated 23 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಚಾಮರಾಜನಗರ: ಒಂದು ಪಕ್ಷಕ್ಕೆ ಇಡೀ ಸಮುದಾಯವನ್ನು ಅಡವಿಡುವ ಕೆಲಸವನ್ನು ಯಾರೂ ಮಾಡಬಾರದು. ಇದನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸ ನಾಯಕ ಸೋಮವಾರ ತಿಳಿಸಿದರು.

ಸಮುದಾಯದ ಬಿಜೆಪಿ ಮುಖಂಡರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಸಂಪೂರ್ಣವಾಗಿ ನಾಯಕ ಸಮಾಜ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬರ್ಥದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಇತರೆ ಪಕ್ಷಗಳಲ್ಲಿ ನಾಯಕ ಸಮಾಜದ ಮುಖಂಡರು ಇದ್ದು, ರಾಜಕಾರಣ ಮಾಡುತ್ತಾರೆ. ವೈಯಕ್ತಿಕ ಹೇಳಿಕೆಯನ್ನು ಸಮಾಜಕ್ಕೆ ಜೋಡಿಸಬಾರದು’ ಎಂದರು. 

ತಳವಾರ ಮತ್ತು ಪರಿವಾರ ಪದವನ್ನು ಎಸ್‌ಟಿ ಸೇರ್ಪಡೆ ಮಾಡಲು 30 ವರ್ಷಗಳ ಹೋರಾಟ ಕಾರಣವಾಗಿದೆ. ಸಮುದಾಯದ ಶ್ರೀಗಳ ನಿರಂತರ ಹೋರಾಟದ ಫಲವಾಗಿ  ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದರಲ್ಲಿ ಬಿಜೆಪಿಯ ಚುನಾವಣಾ ರಾಜಕೀಯವೂ ಇದೆ. ಸಮುದಾಯದ ಬೆಂಬಲ ಪಡೆಯಲು ಈ ತೀರ್ಮಾನ ಕೈಗೊಂಡಿದೆ’ ಎಂದರು. 

‘ಹಿಂದೆ ಕುಲಶಾಸ್ತ್ರೀಯ ಅಧ್ಯಯನ ನಡೆಯದೇ ಇದ್ದುದರಿಂದ ಈ ಎರಡು ಪದಗಳು ಎಸ್‌ಟಿ ಪಟ್ಟಿಗೆ ಸೇರಿರಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುಲಶಾಸ್ತ್ರೀಯ ಅಧ್ಯಯನ ನಡೆಸಿದ್ದರು. ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿದ್ದು, ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನ ನೀಡಿದ್ದು ಕಾಂಗ್ರೆಸ್‌ ಕೊಡುಗೆಯಲ್ಲವೇ’ ಎಂದು ಪ್ರಶ್ನಿಸಿದರು. 

‘ಯಾರೂ ಇಡೀ ಸಮುದಾಯವನ್ನು ಒಂದು ಪಕ್ಷಕ್ಕೆ ಅಡ ಇಡುವ ಕೆಲಸ ಮಾಡಬಾರದು. ಇದಕ್ಕೆ ನಮ್ಮ ವಿರೋಧ ಇದೆ. ಇದನ್ನು ಮುಂದುವರಿಸಿದ್ದೇ ಆದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಶ್ರೀನಿವಾಸ ನಾಯಕ ಎಚ್ಚರಿಸಿದರು. 

ಮುಖಂಡರಾದ ಪಾಳ್ಯ ಕೃಷ್ಣ, ಅರಕಲವಾಡಿ ಸೋಮನಾಯಕ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ, ರಮೇಶ್, ಹಂಗಳ ವೃಷಬೇಂದ್ರ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT