ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಉಪ ಲೋಕಾಯುಕ್ತರಾಗಿದ್ದ ಸುಭಾಷ್ ಬಿ. ಅಡಿ ಅವರು 2018ರಲ್ಲಿ ಬೆಟ್ಟದಲ್ಲಿನ ಭೂ ಕಬಳಿಕೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿ, ಮಂಜೂರು ಮಾಡಿರುವುದಕ್ಕಿಂತಲೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಜಂಟಿ ಸರ್ವೆ ನಡೆಸಲು ಜಿಲ್ಲಾಡಳಿತವು ಸಿಬ್ಬಂದಿ ಕೊರತೆ ಇದೆ ಎಂದು ಸಬೂಬು ಹೇಳುತ್ತ ಮುಂದೂಡುತ್ತಲೇ ಇದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಸಭೆ ನಡೆಸಿದ್ದು, ಜಂಟಿ ಸರ್ವೆಗೆ ಸೂಚಿಸಿದ್ದಾರೆ. ತಕ್ಷಣೇ ಈ ಕೆಲಸವನ್ನು ಮಾಡಬೇಕು. ಅಕ್ರಮವಾಗಿ ಭೂ ಕಬಳಿಕೆ ಮಾಡಿದವರನ್ನು ಒಕ್ಕಲೆಬ್ಬಿಸಿ, ಆ ಜಮೀನುಗಳನ್ನು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.