ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ವೈದ್ಯರ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್,ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ರಮೇಶ್, ಡಾ.ರಘುರಾಂ ಸರ್ವೇಗಾರ, ಹಿರಿಯ ಪ್ರಾಧ್ಯಾಪಕ ಮೋಹನ್ ಗೌಡ, ಹೃದ್ರೋಗ ತಜ್ಞ ಡಾ.ರವಿಶಂಕರ್ ಅವರು ಡಾ.ಬಿಧನ್ ಚಂದ್ರರಾಯ್ ಅವರ ಭಾವಚಿತ್ರದ ಮುಂದೆ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೃಷ್ಣಪ್ರಸಾದ್ ಅವರು, ‘ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೈದ್ಯರ ಸಲಹೆಗಳನ್ನು ಪಡೆದರೆ ಉತ್ತಮ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಜೊತೆಯಲ್ಲಿ ವೈದ್ಯರು ಹೆಚ್ಚು ಕಷ್ಟಪಡಬೇಕಾಗಿದೆ. ರೋಗಿಗಳ ಪ್ರಾಣ ಉಳಿಸುವ ಕೆಲಸಗಳನ್ನು ವೈದ್ಯರು ಮಾಡುತ್ತಿದ್ದಾರೆ’ ಎಂದರು.
ಹೃದ್ರೋಗ ತಜ್ಞ ಡಾ. ರವಿಶಂಕರ್ ಅವರು ಮಾತನಾಡಿ, ‘ಜುಲೈ 1 ವೈದ್ಯರನ್ನು ನೆನೆಯುವ ದಿನ. ಸಮಾಜದಲ್ಲಿ ವೈದ್ಯರು ನೀಡುವ ಸೇವೆ ಅನನ್ಯವಾದದು. ಪಶ್ವಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಡಾ. ಬಿಧನ್ ಚಂದ್ರರಾಯ್ ಅವರ ನೆನಪಾಗಿ ವೈದ್ಯರ ದಿನ ಆಚರಿಸಲಾಗುತ್ತಿದೆ’ ಎಂದರು.
ಡಾ.ರಘುರಾಂ ಸರ್ವೇಗಾರ್ ಅವರು ಮಾತನಾಡಿ, ‘ದೇಶದೆಲ್ಲೆಡೆ ಕೋವಿಡ್-19 ಹರಡುವಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ವೈದ್ಯರ ಸೇವೆ ಅತ್ಯಂತ ಮುಖ್ಯ. ವೈದ್ಯರ ಸಲಹೆಯನ್ನು ರೋಗಿ ಪಾಲಿಸಿದರೆ ಬೇಗನೇ ಗುಣಮುಖರಾಗಲು ಸಾಧ್ಯ’ ಎಂದರು.
ಡಾ.ಸುಮತ್, ಡಾ.ವಿಶ್ವಾಸ್, ಡಾ.ಅಭಿಷೇಕ್ ಹಾಗೂ ಸಿಬ್ಬಂದಿ ಇದ್ದರು.