ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಡಿವೈಎಸ್‌ಪಿ ಮೋಹನ್‌ ಅಮಾನತು

ಅಕ್ರಮ ಮರಳು ಸಾಗಣೆ ಪ್ರಕರಣ ತಿರುಚಿದ್ದ ಪೊಲೀಸ್‌ ಅಧಿಕಾರಿಗಳು
Last Updated 3 ಸೆಪ್ಟೆಂಬರ್ 2020, 15:01 IST
ಅಕ್ಷರ ಗಾತ್ರ

ಚಾಮರಾಜನಗರ: ಅಕ್ರಮ ಮರಳು ಸಾಗಣೆ ಪ್ರಕರಣವೊಂದನ್ನು ತಿರುಚಿದ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿರುವುದರಿಂದ ಚಾಮರಾಜನಗರ ಡಿವೈಎಸ್‌ಪಿ ಜೆ.ಮೋಹನ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಮಂಗಳವಾರವಷ್ಟೇ ಇವರು ಮೈಸೂರಿನಲ್ಲಿರುವ ದಕ್ಷಿಣ ವಲಯ ಐಜಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದರು. ಇನ್ನೂ ಕರ್ತವ್ಯದಿಂದ ಬಿಡುಗಡೆಹೊಂದಿರಲಿಲ್ಲ.

ಮೋಹನ್‌ ಅವರನ್ನು ಅಮಾನತು ಮಾಡಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿರುವುದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ, ಚಾಮರಾಜನಗರ ಗ್ರಾಮಾಂತರ ವಿಭಾಗದ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜು ಕೆ.ಎಂ., ಚಾಮರಾಜನಗರ ಪೂರ್ವ ಠಾಣೆಯ (ರಾಮಸಮುದ್ರ) ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಪಿ.ಸುನಿಲ್‌ ಹಾಗೂ ಅದೇ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ನಾಗ ನಾಯಕ ಅವರನ್ನೂ ಅಮಾನತುಗೊಳಿಸಲಾಗಿತ್ತು. ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌ ಅವರು ಜೂನ್‌ ತಿಂಗಳ 10ರಂದು ಆಮಾನತು ಆದೇಶವನ್ನು ಹೊರಡಿಸಿದ್ದರು.

‌ಪ್ರಕರಣದ ವಿವರ: ಇದೇ ವರ್ಷದ ಮೇ 15ರ ಮಧ್ಯರಾತ್ರಿ ತಾಲ್ಲೂಕಿನ ಮಾದಾಪುರದ ಬಳಿ ಟಿಪ್ಪರ್‌ ಒಂದಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಟಿಪ್ಪರ್‌ ಕ್ಲೀನರ್‌ ಮೃತಪಟ್ಟಿದ್ದಾನೆ ಎಂಬ ಪ್ರಕರಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.

‘ತಿ.ನರಸೀಪುರದಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಟಿಪ್ಪರ್‌, ಮಾದಾಪುರ– ಮಸಣಾಪುರದ ನಡುವೆ ಕೆಟ್ಟು ನಿಂತಿತ್ತು. ಕ್ಲೀನರ್ ಆಗಿದ್ದ ದೊಡ್ಡಮೋಳೆ ಗ್ರಾಮದ ನವೀನ್‌ ಅವರು ಮೊಬೈಲ್‌ನಲ್ಲಿ ಮಾತನಾಡುತ್ತ ಟಿಪ್ಪರ್‌ನ ಹಿಂಬದಿಯಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಭತ್ತದ ಮೂಟೆಗಳನ್ನು ತುಂಬಿದ್ದ ಲಾರಿ ನವೀನ್‌ಗೆ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು’ ಸಂಚಾರ ಠಾಣೆಯ ಪೊಲೀಸರು ಹೇಳಿದ್ದರು.

ಅಕ್ರಮ ಮರಳು ಸಾಗಾಟ: ಪ್ರಕರಣ ನಡೆದ ಕೆಲವು ದಿನಗಳ ನಂತರ ಘಟನೆ ಬಗ್ಗೆ ಹಲವು ವದಂತಿಗಳು ಹರಿದಾಡಲು ಆರಂಭಿಸಿದ್ದವು.

‘ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಈ ವಿಚಾರವನ್ನು ತಿಳಿದ ಇನ್‌ಸ್ಪೆಕ್ಟರ್‌ ಮಂಜು ಅವರು ಮಾದಾಪುರದ ಬಳಿ ಟಿಪ್ಪರ್‌ ಅಡ್ಡ ಹಾಕಿದಾಗ ಚಾಲಕನಾಗಿದ್ದ ನವೀನ್‌ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸುವಾಗ ಲಾರಿ ಡಿಕ್ಕಿ ಹೊಡೆದು ಮೃತಪ‍ಟ್ಟಿದ್ದ. ನಂತರ ಅಕ್ರಮ ಮರಳು ಸಾಗಾಟದ ಪ್ರಕರಣ ಮುಚ್ಚಿ ಹಾಕುವುದಕ್ಕಾಗಿ ಟಿಪ್ಪರ್‌ನಲ್ಲಿದ್ದ ಮರಳನ್ನು ಚೆಲ್ಲಿ, ಎಂ.ಸ್ಯಾಂಡ್‌ ತುಂಬಿಸಿ ಟಿಪ್ಪರ್‌ ಅನ್ನು ಮತ್ತೆ ಅದೇ ಸ್ಥಳದಲ್ಲಿ ತಂದಿಡಲಾಗಿತ್ತು. ನಂತರ ಟಿಪ್ಪರ್‌ ಕೆಟ್ಟು ನಿಂತಿತ್ತು, ಚಾಲಕನನ್ನು ಕ್ಲೀನರ್‌ ಎಂದು ಬಿಂಬಿಸಲಾಗಿದೆ’ ಎಂಬ ಆರೋಪಗಳು ಕೇಳಿ ಬಂದಿದ್ದವು.

ಎಸ್‌ಪಿ, ಐಜಿಪಿಗೆ ದೂರು:ಈ ಬಗ್ಗೆ ಮಾಹಿತಿ ಇದ್ದ ಕೆಲವರು ಆಗಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಹಾಗೂ ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌ ಅವರಿಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಆರೋಪಗಳೆಲ್ಲ ಸಾಬೀತಾಗಿತ್ತು. ಇದರ ಆಧಾರದಲ್ಲಿ ಎಸ್‌ಪಿ ಆನಂದಕುಮಾರ್‌ ಅವರು ಮೂವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಆದರೆ, ಆ ಸಂದರ್ಭದಲ್ಲಿ ಡಿವೈಎಸ್‌ಪಿ ಜೆ.ಮೋಹನ್‌ ಅವರ ಹೆಸರು ಪ್ರಸ್ತಾಪ ಆಗಿರಲಿಲ್ಲ.

ಅಕ್ರಮ ಮರಳು ಸಾಗಣಿಕೆಗೆ ಅವಕಾಶ

ಡಿವೈಎಸ್‌ಪಿ ಮೋಹನ್‌, ಸಿಪಿಐ ಮಂಜು, ಎಸ್‌ಐ ಸುನಿಲ್‌ ಅವರು ಅಕ್ರಮ ಮರಳುಸಾಗಣೆದಾರರೊಂದಿಗೆ ಕೈಜೋಡಿಸಿ, ಅಕ್ರಮವಾಗಿ ಮರಳು ಸಾಗಣಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಒಳಾಡಳಿತ ಇಲಾಖೆ ಬುಧವಾರ (ಸೆ.2) ಹೊರಡಿಸಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ.

ಮರಳು ಟಿಪ್ಪರ್‌ ಲಾರಿ ಅಪಘಾತವಾಗಿದ್ದರ ವಿಷಯ ಮೇಲಾಧಿಕಾರಿಗಳಿಗೆ ತಿಳಿದರೆ ತಮಗೆ ತೊಂದರೆಯಾಗುತ್ತದೆ ಎಂದು ಟಿಪ್ಪರ್‌ನಲ್ಲಿರುವ ಮರಳು ತೆರವುಗೊಳಿವುದಕ್ಕಾಗಿ ಹೆಡ್‌ ಕಾನ್‌ಸ್ಟೆಬಲ್‌ ನಾಗನಾಯಕ ಅವರಿಗೆ ಕರೆ ಮಾಡಿ ಟಿಪ್ಪರ್‌ನಲ್ಲಿ ಇದ್ದ ಮರಳನ್ನು ಹೊರಗೆ ಸಾಗಿಸಿ, ಅದಕ್ಕೆ ಸ್ವಲ್ಪ ಎಂ.ಸ್ಯಾಂಡ್‌ ಹಾಕಿಸಿ ಪ್ರಕರಣವನ್ನು ತಿರುಚಲು ಪ್ರಯತ್ನಿಸುವ ಮೂಲಕ ಕರ್ತವ್ಯಲೋಪ ಎಸಗಿರುವುದು ತನಿಖಾ ವರದಿಯಿಂದ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆದೇಶ ಹೇಳಿದೆ.

ಮೇ 25ಕ್ಕೆ ವರದಿ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌ ಅವರು, ಪ್ರಕರಣದ ತನಿಖೆ ನಡೆಸಿ ಮೇ 25ರಂದೇ ವರದಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT