ಯಳಂದೂರು (ಚಾಮರಾಜನಗರ):ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣಕ್ಕೆ ಬುಧವಾರ ಮುಂಜಾನೆ ಸಲಗವೊಂದು ಪ್ರವೇಶಿಸಿದೆ.
ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಆನೆ ಒಳಗೆ ಪ್ರವೇಶಿಸಿರುವುದನ್ನು ಕಂಡು ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು.
ಶಾಲೆಯ ಹಿಂಭಾಗದ ಸೋಲಾರ್ ತಂತಿಯನ್ನು ಕಿತ್ತು ಒಳಗೆ ಪ್ರವೇಶಿ ಸಿರುವ ಆನೆ ಶಾಲೆಯ ಆವರಣದಲ್ಲಿ ಸುತ್ತಾಡಿದೆ.
ಅರಣ್ಯಾಧಿಕಾರಿ ವರುಣ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಶೀಘ್ರವೇ ಭೇಟಿ ನೀಡಿ ಆನೆಯನ್ನು ವಸತಿ ಶಾಲೆಯ ಹೊರಭಾಗಕ್ಕೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ಪ್ರತಿದಿನ ಗೇಟ್ ಬಳಿ ಆನೆ ಪ್ರತ್ಯಕ್ಷ :
ಪ್ರತಿದಿನ ಆನೆ ವಸತಿ ಶಾಲೆಯ ಆವರಣದ ಗೇಟ್ ಬಳಿ ತಿರುಗಾಡುವುದು ಕಂಡುಬರುತ್ತಿತ್ತು. ಕೆಲವು ದಿನಗಳ ಹಿಂದೆ ಗೇಟ್ ಮುರಿದಿತ್ತು. ಆದರೆ ಬುಧವಾರ ನಸುಕಿನಲ್ಲಿ ಶಾಲಾ ಆವರಣದಲ್ಲಿ ಕಂಡುಬಂದಿರುವುದು ವಿದ್ಯಾರ್ಥಿಗಳ ಪೋಷಕರಿಗೆ ಆತಂಕವನ್ನು ತಂದಿದೆ.