ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆ ನಷ್ಟದ ಆತಂಕದಲ್ಲಿ ರೈತರು

ಮಳೆ, ಶೀತ ವಾತಾವರಣದಿಂದ ಕಟಾವಿಗೆ ತೊಂದರೆ
Last Updated 7 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸೂರ್ಯಕಾಂತಿ ಬೆಳೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡಿದ್ದ ರೈತರು ನಿರಂತರ ಮಳೆಯಿಂದಾಗಿ ಪರಿತಪಿಸುವಂತಾಗಿದೆ. ಗುಂಡ್ಲುಪೇಟೆ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಕಟಾವಿಗೆ ಅಡಚಣೆ ಮಾಡಿದೆ.

ಮೂರು ದಿನಗಳಿಂದ ಮಳೆ ಬಿಡುವು ನೀಡಿದ್ದರೂ, ಆಗಾಗ ಬರುವ ತುಂತುರು ಮಳೆ ಹಾಗೂ ಜಮೀನಿನಲ್ಲಿ ನೀರು ನಿಂತಿರುವುದರಿಂದ ಕಟಾವಿಗೆ ಹಿನ್ನಡೆಯಾಗಿದೆ.

ಹಾಕಿದ್ದರೂ ಕೆಲವು ಕಡೆಗಳಲ್ಲಿ ರೈತರು ಮಳೆ ಬಿಡುವು ನೀಡಿದ ತಕ್ಷಣ ಕಟಾವು ಮಾಡುತ್ತಿದ್ದಾರೆ. ಆದರೆ, ಒದ್ದೆಯಾಗಿರುವ ಸೂರ್ಯಕಾಂತಿಯನ್ನು ಒಣಗಿಸಲು ಬಿಸಿಲು ಇಲ್ಲದಿರುವುದೂ ರೈತರಿಗೆ ಸಮಸ್ಯೆಯಾಗಿದೆ.

ಜಿಲ್ಲೆಯಲ್ಲಿ 16,696 ಹೆಕ್ಟೇರ್‌ಗೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಗುಂಡ್ಲುಪೇಟೆ ತಾಲ್ಲೂಕು ಒಂದರಲ್ಲೇ14,585 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ ಅಡುಗೆ ಎಣ್ಣೆಗೆ ಬೆಲೆ ಹೆಚ್ಚಾಗಿದ್ದರಿಂದ ಈ ಬಾರಿ ಸೂರ್ಯಕಾಂತಿಗೆ ಹೆಚ್ಚು ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು.

ಬಿಸಿಲಿಲ್ಲದೆ ತೊಂದರೆ: ಗುಂಡ್ಲುಪೇಟೆ ತಾಲ್ಲೂಕಿನಕಾಡಂಚಿನ ಭಾಗದ ಜಮೀನುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಜಮೀನಿನ ಒಳಗೆ ಸೂರ್ಯಕಾಂತಿ ಕಟಾವು ಮಾಡುವ ಯಂತ್ರ ಹೋಗಲು ಆಗುತ್ತಿಲ್ಲ. ಆಳುಗಳಿಂದ ಕಟಾವು ಮಾಡಿಸಿ ಒಣಗಿಸಲು ಬಿಸಿಲು ಇಲ್ಲ. ವಾರದಿಂದ ಮಳೆ ಮತ್ತು ರಭಸವಾಗಿ ಗಾಳಿ ಬೀಸುತ್ತಿರುವುದರಿಂದ ಒಣಗಿದ ಸೂರ್ಯಕಾಂತಿ ನೆಲಕಚ್ಚುತ್ತಿದೆ.

‘ತಾಲ್ಲೂಕಿನಲ್ಲಿ 14,585 ಹೆಕ್ಟೆರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಶೇ 25 ರೈತರು ಬೇಗ ಬಿತ್ತನೆ ಮಾಡಿದವರು ಕಟಾವು ಮಾಡಿಕೊಂಡಿದ್ದಾರೆ. ಉಳಿದ ಬೆಳೆ ಮಳೆ ಗಾಳಿಗೆ ಸಿಲುಕಿ ಹಾಳಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಬೆಳೆ ನಷ್ಟವಾಗಬಹುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಹೆಚ್ಚು ಮಳೆಯಾಗಿ ಬೆಳೆ ಹಾಳಾಗಿಲ್ಲ. ಆದರೆ, ಭೂಮಿಯ ತೇವಾಂಶ ಮತ್ತು ಬಿಸಿಲು ಇಲ್ಲದಿರುವುದರಿಂದ ಗಾಳಿಗೆ ಹಾಳಾಗುತ್ತಿದೆ’ ಎಂದರು.

ಗುಂಡ್ಲುಪೇಟೆ ಭಾಗದ ವೀರನಪುರ, ಚಿಕ್ಕತೂಪ್ಪುರು ಶಿಂಡನಪುರ, ಕಗ್ಗಳ ಭಾಗದ ರೈತರು ಮೊದಲೇ ಬಿತ್ತನೆ ಮಾಡಿದ್ದರಿಂದ ಈ ಭಾಗದಲ್ಲಿ ಈಗಾಗಲೇ ಕಟಾವು ಆಗಿದೆ. ಆದರೆ ಹಂಗಳ ಭಾಗದಲ್ಲಿ ಕಟಾವಿಗೆ ಬಂದಿದೆ. ಹಂಗಳ ಹೋಬಳಿಯಲ್ಲಿ ವಾಡಿಕೆಯಂತೆ ಎರಡು ಪಟ್ಟು ಹೆಚ್ಚು ಮಳೆಯಾಗುವುದರಿಂದ ಶೀತ ಹೆಚ್ಚಿದೆ.

‘ಬಿಸಿಲು ಬಂದರೆ ಕೈಗೆ ಬಂದಿರುವ ಬೆಳೆ ಸಿಗುತ್ತದೆ. ಇದೇ ರೀತಿಯಲ್ಲಿ ವಾತಾವರಣ ಮುಂದುವರಿದರೆ ರೈತರು ಕಣ್ಣಿರಲ್ಲಿ ಕೈ ತೊಳೆಯಬೇಕಾಗುತ್ತದೆ.ಕ್ವಿಂಟಲ್‌ಗೆ ₹6,800 ಸೂರ್ಯಕಾಂತಿ ಕೊಳ್ಳುತ್ತಿರುವುದರಿಂದ ಲಾಭದ ನೀರಿಕ್ಷೆ ಮಾಡಿದ್ದೆವು. ಪ್ರಕೃತಿ ವಿಕೋಪದಿಂದ ಈ ರೀತಿಯಲ್ಲಿ ಆಗಿದೆ. ಕೃಷಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಪರಿಹಾರ ಒದಗಿಸಬೇಕು’ ಎಂದು ಮಗುವಿನಹಳ್ಳಿ ರೈತ ಶ್ಯಾಮ್ ಒತ್ತಾಯಿಸಿದರು.

ಮಳೆಯಿಂದಾಗಿ ಈರುಳ್ಳಿ, ಆಲೂಗೆಡ್ಡೆ, ಬೆಳ್ಳುಳ್ಳಿ, ಟೊಮೆಟೊ, ಜೋಳ, ಹತ್ತಿ ಬೆಳೆಗಳು ಜಮೀನಿನಲ್ಲಿ ಕೊಳೆಯುವ ಸ್ಥಿತಿ ಬಂದಿದೆ. ಶನಿವಾರ ಮಧ್ಯಾಹ್ನದಿಂದ ವಾತಾವರಣ ತಿಳಿಯಾಗುವ ಲಕ್ಷಣಗಳು ಕಾಣುತ್ತಿದೆ. ಮಳೆಯನ್ನುನಂಬಿ ಈ ಬಾರಿ ಹೆಚ್ಚು ರೈತರು ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಅತಿಯಾದ ಮಳೆಯಿಂದ ಬೆಳೆ ಕಟಾವು ಮಾಡಲಾಗುತ್ತಿಲ್ಲ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು’ ಎಂದು ರೈತ ಮುಖಂಡ ದಿಲೀಪ್ ಒತ್ತಾಯಿಸಿದರು.

‘ಬೆಳೆಯ ಸ್ಥಿತಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಪರೆಯಲಾಗಿದೆ. ಶೇ 33ರಷ್ಟು ಬೆಳೆ ನಾಶವಾದರೆ ಮಾತ್ರ ಪರಿಹಾರಕ್ಕೆ ವರದಿ ಮಾಡಲಾಗುತ್ತದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಹೇಳಿದರು.

‘ಬೇಗ ಕಟಾವಾದರೆ ಒಳ್ಳೆಯದು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌, ‘ಮಳೆ ಹಾಗೂ ಶೀತ ವಾತಾವರಣದಿಂದ ಸೂರ್ಯಕಾಂತಿ ಕಟಾವಿಗೆ ತೊಂದರೆಯಾಗಿರುವುದು ನಿಜ. ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ. ಹಾಗಾಗಿ, ಕೆಲವು ಕಡೆಗಳಲ್ಲಿ ಕಟಾವು ಮಾಡುತ್ತಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಹಲವು ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿದ್ದೇನೆ. ಒಣಗಿಸಲು ಬಿಸಿಲು ಇಲ್ಲದಿರುವುದರಿಂದ ಕಟಾವು ಮಾಡಿದ ತಕ್ಷಣ ನೇರವಾಗಿ ಮಾರಾಟ ಮಾಡುತ್ತಿದ್ದಾರೆ’ ಎಂದರು.

‘ಬಿಸಿಲು ಬಂದರೆ ಹೆಚ್ಚು ಸಮಸ್ಯೆಯಾಗದು. ಆದರೆ, ಶೀತ ವಾತಾವರಣ ಮುಂದುವರಿದರೆ ಒಣಗಿದ ಸೂರ್ಯಕಾಂತಿಗೆ ಶೀಲಿಂಧ್ರ ಸೇರಿದಂತೆ ಇತರ ಸಮಸ್ಯೆಗಳು ಕಾಡಲಿದೆ. ರೈತರು ಆದಷ್ಟು ಬೇಗ ಕಟಾವು ಮಾಡಿದರೆ ಒಳ್ಳೆಯದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT