ಚಾಮರಾಜನಗರ: ರಾಮಸಮುದ್ರ ಸಮೀಪದ ಗದ್ದೆಯೊಂದರ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯಿಂದಾಗಿ ಕಬ್ಬಿಗೆ ಬೆಂಕಿ ತಗುಲಿ ಅಂದಾಜು ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ನಾಶವಾಗಿದೆ.
ರಾಮಸಮುದ್ರ ಬಡಾವಣೆಯ ನಿವಾಸಿ ಸೋಮಣ್ಣ ಅವರು ಕೋಡಿಮೋಳೆ ಬಸವನಪುರ ಗ್ರಾಮದಲ್ಲಿರುವ ತಮ್ಮ 2 ಎಕರೆ 10 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಮಂಗಳವಾರ ಕಟಾವು ನಡೆಯುತ್ತಿತ್ತು.
ಈ ಸಂದರ್ಭದಲ್ಲಿ ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು ಕಬ್ಬಿಗೆ ಬಿದ್ದಿದೆ ಎನ್ನಲಾಗಿದ್ದು, ಕಬ್ಬು ಸುಟ್ಟುಹೋಗಿರುವುದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಟಾವು ನಡೆಯುತ್ತಿದ್ದುದರಿಂದ ಜಮೀನಲ್ಲಿ 15ಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತು. ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ಆರಿಸಿ ಅನಾಹುತ ತಪ್ಪಿಸಿದರು.
ಜಮೀನಿನಲ್ಲಿ ಹಾದುಹೋಗಿರುವ 11 ಕೆವಿ ಸಾಮರ್ಥ್ಯದ ತಂತಿಯಿಂದಾಗಿ ಪದೇ ಪದೆ ತೊಂದರೆಯಾಗುತ್ತಿದ್ದು, ಈ ಘಟನೆಗೆ ಸೆಸ್ಕ್ನವರೇ ನೇರ ಹೊಣೆ ಎಂದು ಸೋಮಣ್ಣ ದೂರಿದ್ದಾರೆ.