ಯಳಂದೂರು: ತಾಲ್ಲೂಕಿನ ಬಿಳಿಗಿರಿಬೆಟ್ಟ ಮತ್ತು ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬಸ್ ಏರುವಾಗ ಇರಬೇಕಾದ ಅಂತರ ಮತ್ತು ಮಾಸ್ಕ್ ಕಂಡು ಬರಲಿಲ್ಲ. ಹೀಗಾಗಿ ಮಕ್ಕಳು ಮತ್ತು ಮಹಿಳೆಯರು ಬಸ್ನಲ್ಲಿ ಸಂಚರಿಸಲು ಪ್ರಯಾಸ ಪಡಬೇಕಾಯಿತು.
ವಾರಾಂತ್ಯದ ರಜೆ ಇದ್ದದ್ದರಿಂದ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಸ್ ಏರುವಾಗ ಸ್ಯಾನಿಟೈಸರ್ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ. ಸಾಲಾಗಿ ನಿಲ್ಲದೆ, ಏಕಕಾಲದಲ್ಲಿ ಮುಗಿ ಬೀಳುತ್ತಾರೆ. ಇದರಿಂದ ಕೋವಿಡ್–19 ಹರಡುವ ಭೀತಿ ಹಲವರನ್ನು ಕಾಡಲಿದೆ.
‘ಶನಿವಾರ ಮತ್ತು ಭಾನುವಾರ ಜನ ಸಂಚಾರದಲ್ಲಿ ಏರಿಕೆ ಕಂಡುಬಂದಿದೆ. ಆಸನದಲ್ಲಿ ಒಟ್ಟಾಗಿಯೇ ಕುಳಿತು ಪ್ರಯಾಣಿಸುತ್ತಾರೆ. ಹಾಗಾಗಿ, ನಿರ್ವಾಹಕರು ಆಸನ ವ್ಯವಸ್ಥೆ ಇರುವಷ್ಟು ಪ್ರಯಾಣಿಕರಿಗೆ ಟಿಕೆಟ್ ನೀಡಿ, ಕೋವಿಡ್ ವಿರುದ್ಧ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಬೇಕು’ ಎಂದು ಪಟ್ಟಣದ ಮಂಜುನಾಥ್ ಆಗ್ರಹಿಸಿದರು.