ಚಾಮರಾಜನಗರ: ಮೇ 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಕಣದಲ್ಲಿ ನಾಲ್ವರಿದ್ದಾರೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಚತುಷ್ಕೋಣ ಸ್ಪರ್ಧೆ ಏರ್ಪಡಲಿದೆ.
ನಾಮಪತ್ರ ವಾಪಸ್ಗೆ ಕೊನೆಯ ದಿನವಾಗಿದ್ದಸೋಮವಾರ (ಏಪ್ರಿಲ್ 12) ಮೂವರು ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ಬಯಸಿ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಏಪ್ರಿಲ್ 9ರಂದೇ ವಾಪಸ್ ಪಡೆದಿದ್ದರು. ಹಾಲಿ ಅಧ್ಯಕ್ಷ ಬಿ.ಎಸ್.ವಿನಯ್ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಹಾಗಾಗಿ, ಏಳು ಮಂದಿ ಅಭ್ಯರ್ಥಿಗಳಿದ್ದರು.
‘ರವಿಕುಮಾರ್ ಮಾದಾಪುರ, ಶಿವಾಲಂಕಾರಯ್ಯ ಹಾಗೂ ನಿರಂಜನ್ಕುಮಾರ್ ಅವರು ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ’ ಎಂದು ಸಹಾಯಕ ಚುನಾವಣಾಧಿಕಾರಿ ಮಹದೇವಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಂತಿಮ ಕಣದಲ್ಲಿ ಸಿ.ಎಂ.ನರಸಿಂಹಮೂರ್ತಿ, ಶೈಲೇಶ್ ಕುಮಾರ್, ನಾಗೇಶ ಸೋಸ್ಲೆ ಮತ್ತು ಸ್ನೇಹಲಕ್ಷ್ಮಿ ಅವರು ಇದ್ದಾರೆ. ನಾಲ್ವರೂ ಹೊಸಬರಾಗಿದ್ದು, ಸ್ಪರ್ಧೆ ಕುತೂಹಲ ಕೆರಳಿಸಿದೆ.