ಚಾಮರಾಜನಗರ: ನಗರದ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿರುವ ಜನೌಷಧ ಮಳಿಗೆಯನ್ನು ಮುಚ್ಚಿರುವುದಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಲವು ಸಮಯದಿಂದ ಮಳಿಗೆ ಮುಚ್ಚಲಾಗಿದೆ. ಬಡವರಿಗೆ ತೊಂದರೆಯಾಗುತ್ತಿದೆ ಎಂದು ಕೆಲವರು ಸಚಿವರಿಗೆ ದೂರು ನೀಡಿದರು. ಕೋಪಗೊಂಡ ಸಚಿವರು ತಕ್ಷಣವೇ, ಔಷಧ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಬುಧವಾರದಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.
ಬುಧವಾರ ಬೆಳಿಗ್ಗೆ ಮಳಿಗೆಯನ್ನು ತೆರೆಯಲಾಯಿತು. ಮಳಿಗೆಗೆ ಭೇಟಿ ನೀಡಿದ ಶ್ರೀರಾಮಲು ಪರಿಶೀಲನೆ ನಡೆಸಿದರು. ಈಗ ಪರವಾನಗಿ ಹೊಂದಿರುವವರಿಗೆ ಔಷಧಿ ಕೇಂದ್ರವನ್ನು ನಡೆಸಲು ಸಾಧ್ಯವಾಗದಿದ್ದರೇ, ಅದನ್ನು ಮುಟ್ಟುಗೋಲು ಹಾಕಿಕೊಂಡು ಸ್ಥಳೀಯರಿಗೆ ಅವಕಾಶ ಮಾಡಿಕೊಡಿ ಎಂದು ಸೂಚಿಸಿದರು.
ದಾರಿ ತಪ್ಪಿಸುವ ಯತ್ನ: ಈ ವರ್ಷಾರಂಭದಿಂದಲೂ ಮುಚ್ಚಿದ್ದ ಮಳಿಗೆಯನ್ನು ಸಚಿವ ಶ್ರೀರಾಮುಲು ಬರುತ್ತಾರೆ ಎಂದು ಗೊತ್ತಾದ ತಕ್ಷಣ ಮಂಗಳವಾರ ಸಂಜೆ ತೆರೆಯಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಾರ್ವಜನಿಕರು, ‘ಇದುವರೆಗೆ ಮುಚ್ಚಿದ್ದ ಅಂಗಡಿಯನ್ನು ಈಗ ಯಾಕೆ ತೆರೆಯುತ್ತಿದ್ದೀರಿ’ ಎಂದು ಜಗಳ ಮಾಡಿ, ಮತ್ತೆ ಮುಚ್ಚಿಸಿದ್ದರು. ಸಚಿವರ ದಾರಿ ತಪ್ಪಿಸುವ ಯತ್ನವನ್ನು ಅಧಿಕಾರಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.