ಕೊಳ್ಳೇಗಾಲ: ‘ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆ ಸಂಪೂರ್ಣ ನಶಿಸಿ ಹೋಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಮುಡಿಗುಂಡದ ರೇಷ್ಮೆ ಮಾರುಕಟ್ಟೆಯಲ್ಲಿ ಸೋಮವಾರ ನೂತನವಾಗಿ ನಿರ್ಮಾಣವಾಗಿರುವ ದ್ವಿತಳಿ ಘಟಕವನ್ನು ಉದ್ಘಾಟಿಸಿ ನಂತರ ಮಾತನಾಡಿದರು.
‘ರೇಷ್ಮೆಗೆ ತುಂಬಾ ಬೇಡಿಕೆ ಇದೆ. ಆದರೆ ಬೆಳೆಗಾರರು ಸರಿಯಾಗಿ ಬೆಳೆಯುತ್ತಿಲ್ಲ. ಆ ಕಾರಣ ರೈತರು ರೇಷ್ಮೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇತರೆ ಬೆಳೆಗಳಿಗಿಂತ ರೇಷ್ಮೆ ಬೇಸಾಯವು ಉತ್ತಮ ಬೆಳೆಯಾಗಿದೆ. ಈ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸಬೇಕು’ ಎಂದು ಹೇಳಿದರು.
‘ರೇಷ್ಮೆ ಬೆಳೆ ಸುಸ್ಥಿರ ಬೇಸಾಯ ಕೈಗೊಂಡು ರೇಷ್ಮೆ ಬೆಳೆಯನ್ನು ಇತರೆ ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಕೈಗೊಳ್ಳಬಹುದಾಗಿದೆ. ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಹಾಗೂ ಉತ್ತಮ ಬೇಡಿಕೆ ಇರುವುದರಿಂದ ರೈತರು ಹೆಚ್ಚು ಹೆಚ್ಚಾಗಿ ರೇಷ್ಮೆ ಕೃಷಿ ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಸಲಹೆ ನೀಡಿದರು.
‘ಮುಖ್ಯಮಂತ್ರಿಗಳು ಬಜೆಟ್ನಲ್ಲಿ ರೇಷ್ಮೆಗೆ ವಿಶೇಷವಾದ ಪ್ರಾಧ್ಯಾನತೆ ನೀಡಲಿದ್ದಾರೆ. ಜೊತೆಗೆ ರೈತರಿಗೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ಸರ್ಕಾರದಿಂದ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಹ ಭರವಸೆ ನೀಡಿದ್ದಾರೆ. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರಿವರ್ಸ್ಗಳು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಹಾಗಾಗಿ ಅವರ ಸಮಸ್ಯೆಗಳನ್ನು ಸಹ ಶೀಘ್ರವೇ ಬಗೆಹರಿಸಲಾಗುವುದು’ ಎಂದರು.
‘ಎಲ್ಲಿ ಎಲ್ಲಿ ರೇಷ್ಮೆ ಮಾರುಕಟ್ಟೆ ದುರಸ್ತಿಯಲ್ಲಿದೆಯೋ ಅಂಥದ್ದನ್ನು ಸರಿಪಡಿಸಿ ರೇಷ್ಮೆ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುತ್ತೇನೆ ಮತ್ತು ರೇಷ್ಮೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುತ್ತೇವೆ’ ಎಂದು ಹೇಳಿದರು.
ನಂತರ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಮೈಸೂರು ಸಿಲ್ಕ್ ಎಂದರೆ ನಮ್ಮ ಜಿಲ್ಲೆ ನೆನಪಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಮಾರಾಟ ತುಂಬಾ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ರೇಷ್ಮೆ ಗೂಡು. ಹಾಗಾಗಿ ರೈತರು ರೇಷ್ಮೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಬೇಕಾದ ಸವಲತ್ತುಗಳನ್ನು ನೀಡಬೇಕು’ ಎಂದು ಮನವಿ ಮಾಡಿದರು.
ಮುಖಂಡ ಎಸ್ ಜಯಣ್ಣ ‘ನಮ್ಮ ಸರ್ಕಾರವೇ ದ್ವಿತಳಿ ಘಟಕವನ್ನು ಉದ್ಘಾಟನೆ ಮಾಡುತ್ತಿರುವುದು ಸಂತೋಷ ತಂದಿದೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಸಚಿವರು ರೇಷ್ಮೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ರೈತರ ಬಾಳಿಗೆ ಬೆಳಕಾಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಎಎಸ್ಪಿ ಉದೇಶ, ಉಪ ವಿಭಾಗಾಧಿಕಾರಿ ಮಹೇಶ್, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಿ ನರಸಿಂಹ, ಮೈಸೂರು ರೇಷ್ಮೆ ಜಂಟಿ ನಿರ್ದೇಶಕ ಮೇಘಲಾ, ಮೈಸೂರು ವಿಭಾಗ ಸಹಾಯಕ ಕಾರ್ಯನಿರ್ವಾಹಕ ಯೋಗಾನಂದ, ರೇಷ್ಮೆಗೂಡಿನ ಮಾರುಕಟ್ಟೆ ಉಪನಿರ್ದೇಶಕ ರಾಚಪ್ಪ, ನಗರಸಭೆಯ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.