ಚಾಮರಾಜನಗರ: ಕೋವಿಡ್ ಭತ್ಯೆ ಮಂಜೂರು ಮಾಡುವಂತೆ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿರಿಯ ವೈದ್ಯರು ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.
ಕಿರಿಯ ವೈದ್ಯರ ಒಕ್ಕೂಟದ ಆಶ್ರಯದಲ್ಲಿ ವೈದ್ಯರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಭುವನೇಶ್ವರಿ ವೃತ್ತದ ಬಳಿ ಸೇರಿದ ವೈದ್ಯರು ಅಲ್ಲಿಂದ ಜಿಲ್ಲಾಸ್ಪತ್ರೆಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದರು.
‘ಕೋವಿಡ್ ಸಂದರ್ಭದಲ್ಲಿ ಕಿರಿಯ ವೈದ್ಯರು ರೋಗಿಗಳ ಆರೈಕೆ ಮಾಡಿದ್ದಾರೆ. ಸರ್ಕಾರವು ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ಭತ್ಯೆ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ ನೀಡಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಕಿರಿಯ ವೈದ್ಯರ ಒಕ್ಕೂಟದ ಅಧ್ಯಕ್ಷ ಡಾ.ಧೀಮಂತ್, ಉಪಾಧ್ಯಕ್ಷೆ ಡಾ.ಸಹನಾ, ಪದಾಧಿಕಾರಿಗಳಾದ ಡಾ.ಮೋಹನ್, ಡಾ.ತೇಜಸ್ವಿ ಅರುಣ್, ಡಾ.ಗಣೇಶ್, ಡಾ.ಆಸ್ತಾ, ಡಾ.ಹರ್ಷಿತಾ ಇತರರು ಇದ್ದರು.