ಚಾಮರಾಜನಗರ: 12 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ, ಆಕೆಯನ್ನು ಅಪಹರಣ ಮಾಡಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ ಯುವಕನಿಗೆ ಇಲ್ಲಿನ ಮಕ್ಕಳ ಸ್ನೇಹಿ ಮತ್ತು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ತಾಲ್ಲೂಕಿನ ಬಂಡಿಗೆರೆಯ ನಾಗೇಂದ್ರ (23) ಶಿಕ್ಷೆಗೆ ಗುರಿಯಾದ ಯುವಕ. 2021ರ ಸೆಪ್ಟೆಂಬರ್ 13ರಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ, ಅಪಹರಣ ಮಾಡಿದ್ದ ನಾಗೇಂದ್ರ, ಆಕೆ ಬಾಲಕಿ ಎಂದು ಗೊತ್ತಿದ್ದರೂ, ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಅಂದಿನ ಇನ್ಸ್ಪೆಕ್ಟರ್ ಎಂ.ಎಲ್.ಶೇಖರ್ ಅವರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.
ಆರೋಪಗಳು ಸಾಬೀತಾದ್ದರಿಂದ ನ್ಯಾಯಾಧೀಶರಾದ ನಿಶಾರಾಣಿ ಅವರು, ನಾಗೇಂದ್ರನಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶಿಸಿದ್ದಾರೆ.
ಜೊತೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತೆಗೆ ₹ 4 ಲಕ್ಷ ಪರಿಹಾರವನ್ನು 30 ದಿನಗಳ ಒಳಗಾಗಿ ನೀಡಬೇಕು ಎಂದೂ ಆದೇಶಿಸಿದ್ದಾರೆ.