ಹನೂರು: ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಆಗಮಿಕ ಪಂಡಿತ ವಿದ್ವಾನ್ ಜಿ.ಎ.ವಿಜಯ್ಕುಮಾರ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಇತ್ತೀಚೆಗೆಸುಳ್ವಾಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇವಾಲಯವನ್ನು ತೆರೆಯುವಂತೆ ಭಕ್ತರು ಒತ್ತಾಯಿಸಿದ್ದರು.
ವಿಷಪ್ರಸಾದ ದುರಂತ ನಡೆದ ಬಳಿಕ ದೇವಾಲಯವನ್ನು ಮುಜುರಾಯಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿದ ಪಂಡಿತರು ಪೂಜಾ ವಿಧಿವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
ನಂತರ ಮಾತನಾಡಿದ ವಿಜಯ್ ಕುಮಾರ್ ಅವರು, ‘ದೇವಾಲಯದಲ್ಲಿ ದುರಂತ ಸಂಭವಿಸಿ ಒಂದು ವರ್ಷವಾಗಿದೆ.ಅಂದಿನಿಂದ ಪೂಜೆ ನಡೆದಿಲ್ಲ. ಮತ್ತೆ ದೇವಸ್ಥಾನ ತೆರೆಯಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ನಿರ್ಧರಿಸಿ ಜಿಲ್ಲಾಧಿಕಾರಿ ಅವರಿಗೆ ತಿಳಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್ಕುಮಾರ್, ಉಪವಿಭಾಗಾಧಿಕಾರಿ ಕಚೇರಿ ಸಹಾಯಕ ಸುರೇಶ್, ಕಂದಾಯ ನಿರೀಕ್ಷಕ ನಂಜುಂಡಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ವಿನೋದ್, ಕೊಳ್ಳೇಗಾಲ ಮರಳೇಶ್ವರ ದೇವಾಲಯ ಆರ್ಚಕ ನಾಗೇಂದ್ರ ಭಟ್, ಸುಳ್ವಾಡಿ ದೇವಾಲಯದ ಆರ್ಚಕರು, ಗ್ರಾಮಸ್ಥರು ಇದ್ದರು.