ಹನೂರು: ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.
ಸಂಜೆ 4.30ಕ್ಕೆ ತಾಳಬೆಟ್ಟದಲ್ಲಿ ದೂಪ, ಕರ್ಪೂರ ಹಚ್ಚಿ ಪ್ರಾರ್ಥಿಸಿದ ನಿಖಿಲ್ ಅವರು, 18 ಕಿ.ಮೀ ಪಾದಯಾತ್ರೆ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಅವರು, ’ನಮ್ಮದು ಶಿವನ ಭಕ್ತರ ಕುಟುಂಬ. ಈ ಕಾರಣಕ್ಕಾಗಿ ಪಾದಯಾತ್ರೆ ಹೊರಟಿದ್ದೇನೆಯೇ ವಿನಾ ಬೇರೆ ಯಾವ ಉದ್ದೇಶವೂ ಇಲ್ಲ‘ ಎಂದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು,’ ನಮ್ಮ ನಾಡಿನ ಜಲ ನೆಲ ವಿಷಯದ ಪರವಾಗಿ ಯಾವುದೇ ರಾಜಕೀಯ ಪಕ್ಷ ನಿಂತರೂ ಬೆಂಬಲ ಸೂಚಿಸುತ್ತೇವೆ. ಮೇಕೆದಾಟು ಪಾದಯಾತ್ರೆಗೆ ನಮ್ಮ ತಕರಾರಿಲ್ಲ‘ ಎಂದರು.
’ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿದೆ. ಕಾಂಗ್ರೆಸ್ನ ಪಾದಯಾತ್ರೆಯು ಚುನಾವಣೆಗೆ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗಬಾರದು. ಅವರು ಪಾದಯಾತ್ರೆ ಮಾಡಲಿ, ಅವರಿಗೆ ಒಳ್ಳೆಯದಾಗಲಿ‘ ಎಂದರು.
’2018ರಲ್ಲಿ ನನ್ನ ತಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆಯನ್ನು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಹಂತದವರೆಗೆ ಕೊಂಡೊಯ್ದಿದ್ದರು.ಎಚ್.ಡಿ.ದೇವೇಗೌಡ ಅವರು ನೀರಾವರಿ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಯ ಬಗ್ಗೆ ಚಿಂತನೆ ನಡೆಸಿದ್ದರು.ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ಒದಗಿಸಲು ಯೋಚಿಸಿದ್ದರು‘ ಎಂದರು.
ತಿ.ನರಸೀಪುರ ಶಾಸಕ ಅಶ್ವಿನಿ ಗೌಡ, ಮಳವಳ್ಳಿ ಶಾಸಕ ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮಳವಳ್ಳಿ ಮಾಜಿ ಜೆಡಿಎಸ್ ಅಧ್ಯಕ್ಷ ಸಿ.ರವಿ, ಹನೂರು ಶಿವಮೂರ್ತಿ, ಮಂಜೇಶ್, ಗೋವಿಂದ, ಸುರೇಶ್ ಇತರರು ನಿಖಿಲ್ ಜೊತೆಗಿದ್ದರು.