ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿಶ್ವಾಸ ಗಳಿಸದ ಬೆಳೆ ವಿಮೆ ಯೋಜನೆ

ಕೃಷಿ ಇಲಾಖೆಯ ಸತತ ಪ್ರಯತ್ನದ ಹೊರತೂ, ನೋಂದಣಿ ಮಾಡಲು ಮುಂದಾಗದ ಕೃಷಿಕರು
Last Updated 19 ಸೆಪ್ಟೆಂಬರ್ 2021, 16:34 IST
ಅಕ್ಷರ ಗಾತ್ರ

ಚಾಮರಾಜನಗರ: ಅತಿವೃಷ್ಟಿ, ಅನಾವೃಷ್ಟಿ ಅಥವಾ ಇನ್ನಿತರ ಕಾರಣಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ರೈತ ಸುರಕ್ಷತಾ–ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯು ಜಿಲ್ಲೆಯ ರೈತರನ್ನು ಸೆಳೆಯುವಲ್ಲಿ ದೊಡ್ಡ ಮಟ್ಟಿನ ಯಶಸ್ಸು ಗಳಿಸಿಲ್ಲ.

ಕೃಷಿ ಇಲಾಖೆಯು ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡುತ್ತಿದ್ದರೂ, ಬೆಳೆ ವಿಮೆಗೆ ನೋಂದಣಿಯಾಗುವುದರಿಂದ ರೈತರಿಗೆ ಆಗುವ ಪ್ರಯೋಜನಗಳನ್ನು ವಿವಿಧ ರೀತಿಗಳಲ್ಲಿ ವಿವರಿಸಿದರೂ ರೈತರು ದೊಡ್ಡ ಸಂಖ್ಯೆಯಲ್ಲಿ ವಿಮೆಗೆ ನೋಂದಣಿ ಮಾಡುತ್ತಿಲ್ಲ.

ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿದ ವರ್ಷ 2016 ಹಾಗೂ ಮರು ವರ್ಷ 2017ರಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು ಬಿಟ್ಟರೆ, ನಂತರದ ವರ್ಷಗಳಲ್ಲಿ ವಿಮೆ ಮಾಡಿಸಿಕೊಂಡ ರೈತರ ಸಂಖ್ಯೆ ಇಳಿದಿದೆ. ಈ ವರ್ಷ ರೈತರ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ಜಿಲ್ಲೆಯಲ್ಲಿ 2.12 ಲಕ್ಷ ರೈತರು ಇದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಸೇರಿದ 23 ಬೆಳೆಗಳು ವಿಮೆ ವ್ಯಾಪ್ತಿಗೆ ಬರುತ್ತವೆ. ಮುಂಗಾರು ಹಂಗಾಮು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳಿಗೂ ವಿಮೆ ಮಾಡಿಸಬಹುದಾಗಿದೆ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಎರಡೂ ಹಂಗಾಮುಗಳನ್ನು ಸೇರಿಸಿದರೂ 20 ಸಾವಿರಕ್ಕಿಂತ ಹೆಚ್ಚು ರೈತರು ವಿಮೆಗೆ ನೋಂದಣಿ ಮಾಡಿಕೊಂಡಿಲ್ಲ.

2016–17ನೇ ಸಾಲಿನ ಮುಂಗಾರು ಅವಧಿಯಲ್ಲಿ 23,223 ಹಾಗೂ ಹಿಂಗಾರು ಸಮಯದಲ್ಲಿ 47,895 ಸೇರಿದಂತೆ 71,118 ಮಂದಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದೇ ಜಿಲ್ಲೆಯಲ್ಲಿ ಈವರೆಗಿನ ದಾಖಲೆ. 2017–18ರಲ್ಲಿ ಮುಂಗಾರು ಹಂಗಾಮಿನಲ್ಲಿ 42,304 ಹಾಗೂ ಹಿಂಗಾರು ಹಂಗಾಮಿನಲ್ಲಿ ಕೇವಲ 82 ಮಂದಿ ನೋಂದಣಿ ಮಾಡಿಕೊಂಡಿದ್ದರು. ಸಂಖ್ಯಾವಾರು ಲೆಕ್ಕಾಚಾರದಲ್ಲಿ ಇದು ಎರಡನೇ ದೊಡ್ಡ ದಾಖಲೆ. 2018–19ರಲ್ಲಿ ಈ ಸಂಖ್ಯೆ 29,175ಕ್ಕೆ ಇಳಿಯಿತು. 2019–20ರಲ್ಲಿ 20,173ಕ್ಕೆ ಇಳಿದರೆ, 2020–21ರಲ್ಲಿ 11,253ಕ್ಕೆ ಕುಸಿಯಿತು. ಈ ವರ್ಷ ಅಂದರೆ 2021–22ರಲ್ಲಿ ಮುಂಗಾರು ಹಂಗಾಮಿನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರ ಸಂಖ್ಯೆ 18,022ಕ್ಕೆ ತಲುಪಿದೆ. ಹಿಂಗಾರು ಅವಧಿಯಲ್ಲಿ ಎಷ್ಟು ರೈತರು ಬೆಳೆ ವಿಮೆ ಮಾಡಿಸುತ್ತಾರೆ ಎಂಬುದನ್ನು ಇನ್ನು ನೋಡಬೇಕಷ್ಟೆ.

ಬ್ಯಾಂಕುಗಳಲ್ಲಿ ಕೃಷಿ ಸಾಲ ಮಾಡುವಾಗ ವಿಮೆ ಮಾಡಿಸಬೇಕಾಗುತ್ತದೆ (ವಿಮೆ ಮಾಡಿಸುವುದು ಕಡ್ಡಾಯವೇನಲ್ಲ ಮೊದಲೇ ವಿಮೆ ಬೇಡ ಎಂದು ಲಿಖಿತವಾಗಿ ನೀಡುವುದಕ್ಕೆ ಅವಕಾಶ ಇದೆ). ಹಾಗಾಗಿ, ಕೆಲವು ರೈತರು ಅನಿವಾರ್ಯವಾಗಿ ಮಾಡಿಸುತ್ತಾರೆ. ಇಲ್ಲದಿದ್ದರೆ ಇಷ್ಟು ಪ್ರಮಾಣದ ನೋಂದಣಿಯೂ ಆಗುವುದಿಲ್ಲ ಎಂದು ಹೇಳುತ್ತಾರೆ ಕೃಷಿಕರು.

ಹಲವು ಕಾರಣ: ರೈತರು ವಿಮೆಯನ್ನು ಮಾಡಿಸದೇ ಇರುವುದಕ್ಕೆ ಹಲವು ಕಾರಣಗಳಿವೆ.

ಮಳೆ ಚೆನ್ನಾಗಿ ಬಂದು ಉತ್ತಮ ಬೆಳೆ ತೆಗೆಯಲು ಸಾಧ್ಯವಾಗುವ ಸನ್ನಿವೇಶ ಇದ್ದರೆ ರೈತರು ವಿಮೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಇದರಲ್ಲೂ ಸ್ವಲ್ಪ ನಿಜಾಂಶ ಇದೆ. ಆದರೆ, ಪೂರ್ತಿ ನಿಜವಲ್ಲ.

ರೈತರು ವ್ಯಕ್ತಪಡಿಸುವ ಅಭಿಪ್ರಾಯಗಳ ಪ್ರಕಾರ, ಅಗತ್ಯವಿದ್ದಾಗ ವಿಮೆ ಪರಿಹಾರ ಮೊತ್ತ ಬಾರದೇ ಇರುವುದು, ವಿಮೆಯ ಕಠಿಣ ನಿಯಮಗಳು, ಬೆಳೆ ನಷ್ಟದ ಸಂದರ್ಭದಲ್ಲಿ ನಡೆಸುವ ಸಮೀಕ್ಷೆಯ ವಿಧಾನದ ಬಗೆಗಿನ ಅಸಮಾಧಾನ, ಪಹಣಿ ಸೇರಿದಂತೆ ದಾಖಲೆಗಳನ್ನು ಹೊಂದಿಸುವ ಸವಾಲು... ಇವೆಲ್ಲವೂ ವಿಮೆಯಿಂದ ರೈತರು ದೂರ ಉಳಿಯಲು ಕಾರಣ.

2016ರ ಹಿಂಗಾರು ಅವಧಿಯಲ್ಲಿ ಬೆಳೆ ವಿಮೆ ಮಾಡಿಸಿಕೊಂಡಿದ್ದ 27,467 ರೈತರ ಪೈಕಿ 27,108 ಮಂದಿಗೆ ಪರಿಹಾರ ಮೊತ್ತ ಬರಲು ಐದು ವರ್ಷಗಳು ಬೇಕಾ‌ಯಿತು. ತಾಂತ್ರಿಕ ಕಾರಣಗಳಿಂದಾಗಿ ರೈತರಿಗೆ ಬರಬೇಕಿದ್ದ ₹12.77 ಕೋಟಿ ವಿಮೆ ಪರಿಹಾರ ಬಂದಿರಲಿಲ್ಲ. ಐದು ವರ್ಷಗಳ ಸತತ ಹೋರಾಟದ ಬಳಿಕ ಈಗ್ಗೆ ಕೆಲವು ತಿಂಗಳುಗಳ ಹಿಂದೆ ರೈತರ ಖಾತೆಗೆ ವಿಮೆ ಮೊತ್ತ ಜಮೆ ಆಗಿದೆ. ಇನ್ನೂ 359 ರೈತರಿಗೆ ಹಣ ತಲುಪಬೇಕಿದೆ.

ಈ ಒಂದು ಪ್ರಕರಣದಿಂದಾಗಿ ರೈತರು ವಿಮೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರು ಎಂಬುದನ್ನು ಕೃಷಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

‘ತಾಲ್ಲೂಕಿನಲ್ಲಿ ಇನ್ನೂ ಅನೇಕ ರೈತರಿಗೆ ಹಿಂದಿನ ವರ್ಷದ ವಿಮೆ ಸಿಕ್ಕಿಲ್ಲ. ರೈತರು ಬ್ಯಾಂಕ್ ಮೂಲಕ ಸಾಲ ಪಡೆಯುವ ಉದ್ದೇಶದಿಂದ ಮಾತ್ರವೇ ವಿಮೆ ಮಾಡಿಸುತ್ತಿದ್ದಾರೆ ವಿನಾ ವಿಮೆಯಿಂದ ಉಪಯೋಗ ಆಗುತ್ತದೆ ಎಂದಲ್ಲ’ ಎಂದು ಗುಂಡ್ಲುಪೇಟೆಯ ರೈತ ಮುಖಂಡ ಶಿವಪುರ ಮಹಾದೇವಪ್ಪ ಅವರು ತಿಳಿಸಿದರು.

ಬಾರದ ವಿಮೆ: 2016ರ ಹಿಂಗಾರು ಹಂಗಾಮಿನ ಪರಿಹಾರ ಮೊತ್ತ ಬಿಟ್ಟು, ಉಳಿದ ವರ್ಷಗಳಲ್ಲಿ ನಿಯಮಗಳ ಅನ್ವಯ ವಿಮಾ ಕಂಪನಿಗಳು ಪರಿಹಾರ ನೀಡಿವೆ. ಬ್ಯಾಂಕ್‌ ಖಾತೆ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಆಗದಿರುವುದು, ಲಭ್ಯವಿರದ ಬ್ಯಾಂಕ್‌ ಖಾತೆಗಳ ವಿವರ ಮುಂತಾದ ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಬೆಳೆ ವಿಮೆ ವ್ಯಾಪ್ತಿಗೆ ಬರುವ ಬೆಳೆಗಳು

ಜಿಲ್ಲೆಯಲ್ಲಿ 2021–22ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ 23 ಬೆಳೆಗಳನ್ನು ಗುರುತಿಸಲಾಗಿದೆ. ಬೆಳೆಗಳನ್ನು ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗಳು ಎಂದು ವಿಂಗಡಿಸಲಾಗಿದೆ.

ನೀರಾವರಿ ಆಶ್ರಿತ ಬೆಳೆಗಳು:ಭತ್ತ, ಮುಸುಕಿನ ಜೋಳ, ರಾಗಿ, ಜೋಳ, ಸೂರ್ಯಕಾಂತಿ, ಈರುಳ್ಳಿ, ಟೊಮೆಟೊ, ಅರಿಸಿಣ, ಆಲೂಗೆಡ್ಡೆ ಮತ್ತು ಸಜ್ಜೆ.

ಮಳೆಯಾಶ್ರಿತ ಬೆಳೆಗಳು: ಜೋಳ, ಸೂರ್ಯಕಾಂತಿ, ರಾಗಿ, ಮುಸುಕಿನ ಜೋಳ, ಉದ್ದು, ಎಳ್ಳು, ತೊಗರಿ, ನೆಲಗಡಲೆ (ಶೇಂಗಾ), ಹೆಸರು, ಅಲಸಂದೆ, ಹುರುಳಿ, ಹತ್ತಿ ಹಾಗೂ ಸಜ್ಜೆ.

----

ಪರಿಸ್ಥಿತಿ ನೋಡಿಕೊಂಡು ನೋಂದಣಿ

ಜಿಲ್ಲೆಯಲ್ಲಿ ಮೊದಲ ಎರಡು ವರ್ಷ ಹೆಚ್ಚಿನ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದರು. ನಂತರದ ವರ್ಷದಲ್ಲಿ ನೋಂದಣಿ ಮಾಡುವ ರೈತರ ಸಂಖ್ಯೆ ಕಡಿಮೆಯಾಯಿತು. ಈ ವರ್ಷ ಮತ್ತೆ ಹೆಚ್ಚಾಗಿದೆ. ರೈತರು ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ವಿಮೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದ್ದರಿಂದ ಫಸಲು ಚೆನ್ನಾಗಿತ್ತು. ನಷ್ಟವಾಗುವ ಭೀತಿ ಇರಲಿಲ್ಲ. ಈ ವರ್ಷ ಮುಂಗಾರು ಪೂರ್ವ ಮಳೆ ಕಡಿಮೆಯಾಗಿದ್ದರಿಂದ ಜಿಲ್ಲೆಯಲ್ಲಿ ಉದ್ದು ಹೆಸರು ಸೇರಿದಂತೆ ಹಲವು ಬೆಳೆಗಳಿಗೆ ತೊಂದರೆಯಾಗಿತ್ತು. ಇಳುವರಿ ಕಡಿಮೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 2016ರ ಹಿಂಗಾರು ಅವಧಿಯ ಪರಿಹಾರ ಮೊತ್ತ ವಿತರಣೆಗೆ ಮಾತ್ರ ವಿಳಂಬವಾಗಿದೆ. ಉಳಿದಂತೆ ಪ್ರತಿ ವರ್ಷವೂ ಫಲಾನುಭವಿಗಳಿಗೆ ವಿಮಾ ಕಂಪನಿಗಳು ಪರಿಹಾರ ನೀಡುತ್ತಿವೆ. ತಾಂತ್ರಿಕ ಕಾರಣಗಳಿಂದ 2016ರಲ್ಲಿ ಪರಿಹಾರ ಬರುವುದು ವಿಳಂಬವಾಗಿತ್ತು. ಈಗ ಅದನ್ನು ಪಾವತಿ ಮಾಡಲಾಗಿದೆ.

ಎಚ್‌.ಟಿ.ಚಂದ್ರಕಲಾ,ಕೃಷಿ ಇಲಾಖೆ ಜಂಟಿ ನಿರ್ದೇಶಕಿ

-------

ಕೃಷಿಕರು ಏನಂತಾರೆ?

ದಾಖಲೆ ಹೊಂದಿಸುವ ಸವಾಲು

ಬೆಳೆ ಸಮೀಕ್ಷೆ ಬಂದ ನಂತರ ಕೃಷಿ ಭೂಮಿಯನ್ನು ಚಿತ್ರ ಸಮೇತ ಅಪ್ಲೋಡ್ ಮಾಡಬೇಕು. ಬ್ಯಾಂಕ್
ಮತ್ತಿತರ ಕಡೆ ಹತ್ತಾರು ದಾಖಲೆಗಳೊಂದಿಗೆ ಓಡಾಡಬೇಕು. ಬೆಳೆ ಹಾನಿ ಮತ್ತಿತರ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಹೊಂದಿಸಬೇಕು. ಹಾಗಾಗಿ, ಪ್ರತಿ ವರ್ಷ ವಿಮೆಪಡೆಯುವ ರೈತರ ಸಂಖ್ಯೆಯಲ್ಲಿ ಇಳಿಕೆ ಆಗಿದೆ.

-ಶಿವಶಂಕರ್,ಅಂಬಳೆ, ಯಳಂದೂರು ತಾಲ್ಲೂಕು

ಪ್ರಯೋಜನ ಇಲ್ಲ

ಪ್ರತಿ ವರ್ಷ ಹಣ ತುಂಬಿದರೂ ಪ್ರಯೋಜನ ಇಲ್ಲ. ಬರ ಇಲ್ಲವೇ ನೆರೆ ಬಂದಾಗ ಮಾತ್ರವಿಮೆಯಿಂದ ಲಾಭ ಇದೆ. ಈ ವರ್ಷ ಉತ್ತಮ ಮಳೆ ಆಗುತ್ತಿದ್ದು, ನೋಂದಣಿ ಮಾಡಿಸಲು ಮುಂದಾಗಿಲ್ಲ.

-ಸಿದ್ದರಾಜಮ್ಮ, ಕೆಸ್ತೂರು, ಯಳಂದೂರು ತಾಲ್ಲೂಕು

ಸರಿ ಅನುಷ್ಠಾನವಾಗಲಿ

ಬೆಳೆ ವಿಮೆಯನ್ನು ಮಾಡಿಸಿದ್ದೇವೆ. ಆದರೆ, ಅದು ಸರಿಯಾದ ಸಮಯಕ್ಕೆ ಬರುವುದಿಲ್ಲ. ಒಂದು ವರ್ಷ ಬಂದರೆ ಮತ್ತೇ ಬರುವುದೇ ಇಲ್ಲ. ಆ ಕಾರಣ ಸ್ವಲ್ಪ ಬೇಸರವಾಗಿದೆ. ತಡವಾಗುವುದು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ರೈತರಿಗೆ ಅನುಕೂಲವಾಗುವಂತಹ ಯೋಜನೆ ಇದು. ಆದರೆ, ಅನುಷ್ಠಾನ ಸರಿಯಾಗಿ ಮಾಡಬೇಕು.

-ಲಾರೆನ್ಸ್‌, ಜಕ್ಕಳಿ, ಕೊಳ್ಳೇಗಾಲ ತಾಲ್ಲೂಕು

ವಿಮಾ ಕಂಪನಿಗಳಿಗೆ ಲಾಭ

ಬೆಳೆ ವಿಮೆಯಿಂದ ರೈತರಿಗೆ ದೊಡ್ಡ ಪ್ರಯೋಜನ ಇಲ್ಲ. ವಿಮೆ ಕಟ್ಟಿಸಿಕೊಳ್ಳುವ ಕಂಪನಿಗಳು ಮಾತ್ರ ಉದ್ಧಾರ ಆಗುತ್ತಿದೆ. ವೈಯಕ್ತಿಕವಾಗಿ ಬೆಳೆಗೆ ವಿಮೆ ಕಟ್ಟಿಸಿಕೊಂಡು, ಸಾಮೂಹಿಕವಾಗಿ ಸರ್ವೆ ಮಾಡುತ್ತಾರೆ. ಇದರಿಂದಾಗಿ ವಿವಿಧ ಕಾರಣಗಳಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಇದರ ಉಪಯೋಗ ಸಿಗುವುದಿಲ್ಲ. ಎರಡು, ಮೂರು ವರ್ಷಗಳ ಹಿಂದೆ ಕಟ್ಟಿರುವ ಬೆಳೆ ವಿಮೆ ಇನ್ನೂ ಬಂದಿಲ್ಲ. ಇದು ಬದಲಾವಣೆ ಆಗಬೇಕು

-ಮಧು, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

ಪರಿಹಾರದ ನಿರೀಕ್ಷೆಯಲ್ಲಿ...

ಕಳೆದ ವರ್ಷ ಎರಡು ಎಕರೆ ಹುರಳಿ ಬೆಳೆಗೆ ವಿಮೆ ಅರ್ಜಿ ಸಲ್ಲಿಸಿದ್ದೆ. ₹9,000 ಪರಿಹಾರ ಬಂದಿತ್ತು. ಈ ಬಾರಿ ಒಂದು ಎಕರೆಯಲ್ಲಿ ಎಳ್ಳು ಬೆಳೆದಿದ್ದೆ. ಆದರೆ ಮಳೆಯಿಲ್ಲದೇ ಒಣಗಿ ಹೋಗಿದೆ. ಈ ವರ್ಷವೂ ವಿಮೆಗೆ ಅರ್ಜಿ ಸಲ್ಲಿಸಿದ್ದೇನೆ. ಪರಿಹಾರ ಬರುವ ನಿರೀಕ್ಷೆಯಲ್ಲಿ ಇದ್ದೇನೆ.

-ರಾಚಪ್ಪ, ನಾಗನತ್ತ, ಹನೂರು ತಾಲ್ಲೂಕು

ಕಳೆದ ವರ್ಷ ಬರಲಿಲ್ಲ

ಎರಡು ವರ್ಷಗಳ ಹಿಂದೆ ನಾಲ್ಕು ಎಕರೆ ರಾಗಿ ಬೆಳೆಗೆ ವಿಮೆ ಮಾಡಿಸಿದ್ದೆ. ಬೆಳೆ ನಷ್ಟ ಆಗಿದ್ದಕ್ಕೆ ₹30 ಸಾವಿರ ಪರಿಹಾರ ಬಂದಿತ್ತು. ಕಳೆದ ವರ್ಷ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಹುರುಳಿ ಫಸಲಿಗೆ ವಿಮೆ ಮಾಡಿದ್ದೆ. ಪರಿಹಾರ ಬಂದಿಲ್ಲ. ಈ ವರ್ಷ ನಾಲ್ಕು ಎಕರೆಯಲ್ಲಿ‌ ಮುಸುಕಿನ ಜೋಳ ಬೆಳೆದಿದ್ದೇನೆ. ಕಳೆದ ವರ್ಷದ ಪರಿಹಾರ ಬರಲಿಲ್ಲ ಎಂಬ ಕಾರಣಕ್ಕೆ ಈ ವರ್ಷ ಅರ್ಜಿ ಸಲ್ಲಿಸಿಲ್ಲ.

-ಕೆಂಪದೇವಮ್ಮ, ಬಂಡಳ್ಳಿ, ಹನೂರು ತಾಲ್ಲೂಕು

ರೈತರಿಗೆ ವಿಶ್ವಾಸ ಇಲ್ಲ

ಬೆಳೆ ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಮಾಡುವ ಸಮೀಕ್ಷೆ ವೈಜ್ಞಾನಿಕವಾಗಿಲ್ಲ. ಶೇ 70ಕ್ಕಿಂತ ಹೆಚ್ಚು ನಷ್ಟವಾದರೆ ಮಾತ್ರ ಪರಿಹಾರ ಕೊಡುತ್ತಾರೆ. ನೋಂದಣಿ ಮಾಡಿ ಬೆಳೆ ನಷ್ಟ ಅನುಭವಿಸಿದವರಿಗೆ ಸರಿಯಾಗಿ ವಿಮಾ ಪರಿಹಾರ ಬಂದಿಲ್ಲ. ಹಾಗಾಗಿ, ರೈತರಲ್ಲಿ ಈ ಯೋಜನೆ ಬಗ್ಗೆ ದೊಡ್ಡ ವಿಶ್ವಾಸ ಇಲ್ಲ

-ಸುಭಾಷ್‌, ಸಂತೇಮರಹಳ್ಳಿ, ಚಾಮರಾಜನಗರ ತಾಲ್ಲೂಕು

-------

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಮಲ್ಲೇಶ ಎಂ., ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT