* ಪತ್ನಿ ಹಾಗೂ ಪುತ್ರಿಯೊಂದಿಗೆ ಜಿಲ್ಲೆಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೊದಲು ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದರು. ಅದು ಖಾಸಗಿ ಕಾರ್ಯಕ್ರಮವಾಗಿತ್ತು. ಯಳಂದೂರು ತಾಲ್ಲೂಕಿನ ವಡಗೆರೆಯಲ್ಲಿ ಇಳಿದ ರಾಷ್ಟ್ರಪತಿ ಅವರು ರಸ್ತೆ ಮಾರ್ಗವಾಗಿ ಬೆಟ್ಟಕ್ಕೆ ಹೋದರು.
* ನಿಗದಿತ ಸಮಯದಿಂದ (1.25) 18 ನಿಮಿಷಗಳಷ್ಟು ತಡವಾಗಿ ಅಂದರೆ 1.43ಕ್ಕೆ ಚಾಮರಾಜನಗರದ ಬೋಧನಾ ಆಸ್ಪತ್ರೆ ಬಳಿ ನಿರ್ಮಿಸಲಾದ ಹೆಲಿಪ್ಯಾಡ್ನಲ್ಲಿ ರಾಷ್ಟ್ರಪತಿ ಅವರು ಬಂದಿಳಿದರು.ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಅವರು ದೇಶದ ಪ್ರಥಮ ಪ್ರಜೆಯನ್ನು ಬರಮಾಡಿಕೊಂಡರು.
* ಮೂರು ಹೆಲಿಕಾಪ್ಟರ್ಗಳು ಒಂದರ ಹಿಂದೆ ಒಂದೊಂದಾಗಿ ಹೆಲಿಪ್ಯಾಡ್ನಲ್ಲಿ ಬಂದಿಳಿದರೆ, ಜನರು ದೂರದಿಂದ ದೃಶ್ಯಾವಳಿಯನ್ನು ಕಣ್ತುಂಬಿಕೊಂಡರು.
* ಯಡಬೆಟ್ಟದ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಗುಂಡ್ಲುಪೇಟೆ ರಸ್ತೆಯಲ್ಲಿ ವೈದ್ಯಕೀಯ ಕಾಲೇಜಿಗೆ ತಿರುಗುವ ರಸ್ತೆಯ ಬಳಿಯಲ್ಲೇ ಎಲ್ಲ ವಾಹನಗಳನ್ನು ತಡೆಯುತ್ತಿದ್ದ ಪೊಲೀಸರು, ಪಾಸ್ ಇದ್ದವರನ್ನು ಮಾತ್ರ ಬಿಡುತ್ತಿದ್ದರು. ಸಮಾರಂಭ ನಡೆಯುವ ಸಭಾಂಗಣಕ್ಕೆ ಪ್ರವೇಶ ಪಡೆಯುವಾಗಲೂ ಬಿಗಿ ತಪಾಸಣೆ ನಡೆಸಲಾಗುತ್ತಿತ್ತು. ನೀರಿನ ಬಾಟಲಿ ಕೊಂಡೊಯ್ಯಲೂ ಅವಕಾಶ ಇರಲಿಲ್ಲ.
* ವೇದಿಕೆಯಲ್ಲಿ ಆರು ಜನರಿಗೆ ಮಾತ್ರ ಅವಕಾಶ ಇತ್ತು. ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಶಾಸಕರು, ಪಕ್ಷಗಳ ಮುಖಂಡರು, ನ್ಯಾಯಾಧೀಶರು ಸೇರಿದಂತೆ ಇತರರು ಗಣ್ಯರ ಸಾಲಿನಲ್ಲಿ ಕೂತಿದ್ದರು.ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನಕುಮಾರ್, ಹರ್ಷವರ್ಧನ, ಎಸ್.ಸುರೇಶ್ ಕುಮಾರ್ ಮತ್ತಿತರರು ಇದ್ದರು.
* ಉದ್ಘಾಟನಾ ಸಮಾರಂಭ 50 ನಿಮಿಷ ತಡವಾಗಿ ಆರಂಭವಾಯಿತು. ವೇಳಾಪಟ್ಟಿ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಿತ್ತು. ಆದರೆ, ರಾಷ್ಟ್ರಪತಿ ಅವರು ವಿಶ್ರಾಂತಿಯಲ್ಲಿ ಇದ್ದುದರಿಂದ, 4.20ಕ್ಕೆ ಆರಂಭವಾಯಿತು. ಸರಿಯಾಗಿ ಒಂದು ಗಂಟೆಯಲ್ಲಿ ಮುಕ್ತಾಯವಾಯಿತು. ಕಾಲೇಜಿನ ವಿದ್ಯಾರ್ಥಿಗಳೆಲ್ಲಾ 12 ಗಂಟೆಗೇ ಊಟ ಮಾಡಿ ಸಭಾಂಗಣದಲ್ಲಿದ್ದರು.
* ನವರಾತ್ರಿಯ ಮೊದಲ ದಿನ ಉದ್ಘಾಟನೆ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಭಾಷಣದಲ್ಲಿ, ‘ಇಂದು ನವರಾತ್ರಿಯ ಮೊದಲ ದಿನವಾಗಿದ್ದು, ಈ ಪವಿತ್ರ ದಿನದಂತೇ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ’ ಎಂದು ಘೋಷಿಸಿದರು.
* ಪೊಲೀಸ್ ವಾದ್ಯ ವೃಂದದವರು ನುಡಿಸಿದ ರಾಷ್ಟ್ರಗೀತೆಯೊಂದಿಗೆ ಆರಂಭವಾದ ಸಮಾರಂಭ, ರಾಷ್ಟ್ರಗೀತೆಯೊಂದಿಗೇ ಮುಕ್ತಾಯ ಕಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.