ಚಾಮರಾಜನಗರ: ಕೊರೊನಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಮಗೆ ₹25 ಸಾವಿರ ಪ್ರೋತ್ಸಾಹಧನ, ಬಸ್ ಪಾಸ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ವತಿಯಿಂದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರುಇ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಐಸಿಡಿಎಸ್ ಯೋಜನೆಯ ಅನುದಾನವನ್ನು ಹೆಚ್ಚಳ ಮಾಡಿ ಮಕ್ಕಳು ಮತ್ತು ಮಹಿಳೆಯರನ್ನು ಕಾಪಾಡಬೇಕು, ಅಂಗನವಾಡಿ ಕೇಂದ್ರಗಳಿಗೆ ಮತ್ತು ಕಾರ್ಯಕರ್ತೆಯರಿಗೆ ಕೋವಿಡ್–19 ತಡೆಯುವ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು’ ಎಂದು ಪ್ರತಿಭಟನನಿರತರು ಒತ್ತಾಯಿಸಿದರು.
ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವಕಾರ್ಯಕರ್ತೆಯರಿಗೆ ₹25 ಸಾವಿರ ಪ್ರೋತ್ಸಾಹ ಧನ, ಬಸ್ಪಾಸ್, ಊಟದ ವೆಚ್ಚವನ್ನು ಸರ್ಕಾರ ಭರಿಸಬೇಕು. ಎಲ್ಐಸಿ ಆಧರಿತ ನಿವೃತ್ತಿ ವೇತನ ಕೊಡಬೇಕು’ ಎಂದು ಆಗ್ರಹಿಸಿದರು.
‘ಕಾರ್ಯಕರ್ತೆಯರ ಸೇವಾ ಹಿರಿತನವನ್ನು ಪರಿಗಣಿಸಿ ಅವರಿಗೆಮೇಲ್ವಿಚಾರಕರ ಹುದ್ದೆ ನೀಡಬೇಕು, ಕಾರ್ಯಕರ್ತೆಯರು ಕೊರೊನಾ ಸೈನಿಕರು ಆಗಿರುವುದರಿಂದ ಅವರಿಗೆ ₹50 ಲಕ್ಷ ವಿಮೆ ನೀಡಬೇಕು. ಸೋಂಕಿತರಿಗೆ ₹5 ಲಕ್ಷ ಪರಿಹಾರ ನೀಡಬೇಕು, ಕುಟುಂಬಕ್ಕೂ ವಿಮೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.
‘ನೌಕರರನ್ನು ಖಾಯಂ ಮಾಡುವ ತನಕ ₹30 ಸಾವಿರ, ಸಹಾಯಕಿಯರಿಗೆ ₹21 ಸಾವಿರ ವೇತನ ಕೊಡಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಜನ ವಿರೋಧಿ, ಕಾರ್ಮಿಕ ವಿರೋಧಿ ಭೂ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ರದ್ದುಪಡಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ರೇವಮ್ಮ,ಎ. ನಾಗವೇಣಿ, ಶಹಿದಾಭಾನು, ಯಶೋಧಮ್ಮ, ಗುರುಲಿಂಗಮ್ಮ, ಶಾರದ, ಚಂದ್ರಕಲಾ, ರಾಜಮ್ಮ, ತಾಯಮ್ಮ, ನಂಜಮಣಿ, ಗಂಗಾಂಭಿಕೆ, ವರಲಕ್ಷ್ಮಿ, ಲೀಲಾವತಿ, ಶಶಿಕಲಾ ಇತರರು ಇದ್ದರು.