ಕೊಳ್ಳೇಗಾಲ: ಮಣಿಪುರ, ಹರಿಯಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮತೀಯ ಗಲಭೆ, ಹಿಂಸಾಚಾರ ನಡೆಯುತ್ತಿರುವುದನ್ನು ಖಂಡಿಸಿ ಇಲ್ಲಿನ ಎಸ್.ಡಿ.ಪಿ.ಐ ಸಂಘಟನೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.
ಎಸ್ಡಿಪಿಐ ಟೌನ್ ಅಧ್ಯಕ್ಷ ಜಾಕಿರ್ ಪಾಷಾ ಮಾತನಾಡಿ, ಬಿಜೆಪಿ ಪಕ್ಷ ಹಿಂಸಾಚಾರ ಕೋಮು ಗಲಭೆ ಉಂಟುಮಾಡಿ ದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ.ನರೇಂದ್ರ ಮೋದಿ ಅವರು ಶಾಂತಿ ಕಾಪಾಡುವಂತೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಮಹಿಳೆಯರ ಬೆತ್ತಲೆ ಮೆರವಣಿಗೆ ಆದಗಲೂ ಇವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹರಿಯಾಣದಲ್ಲಿ ಗೋರಕ್ಷಣೆ ಹೆಸರಲ್ಲಿ ಅಮಾಯಕರನ್ನು ಕೊಂದು ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ಬಿಜೆಪಿ ಪಕ್ಷ ಹಾಗೂ ಸಂಘ ಪರಿವಾರ ರಕ್ಷಣೆ ನೀಡುತ್ತಾ ಬಂದಿದೆ ಎಂದು ಆರೋಪಿಸಿದರು.
ಹರಿಯಾಣದಲ್ಲಿ ಒಬ್ಬ ಮುಸ್ಲಿಂ ಧರ್ಮಗುರು ಸೇರಿದಂತೆ ಐದು ಮಂದಿ ಅಮಾಯಕರನ್ನು ಕೊಲೆ ಮಾಡಲಾಗಿದೆ. ಇಷ್ಟೊಂದು ದ್ವೇಷ ಹಾಗೂ ದಳ್ಳೂರಿ, ಕೋಮುಗಲಭೆ ಇದ್ದರೂ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ಇಡೀ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿದೆ ಎಂದರು.
ಎಸ್ಡಿಪಿಐ ಉಪಾಧ್ಯಕ್ಷ ಸೈಯದ್ ಮುಜೀಮಿಲ್ಲಾ, ಕಾರ್ಯದರ್ಶಿ ಮಹಮ್ಮದ್ ಇಮ್ರಾನ್, ಖಜಾಂಚಿ ರಿಜ್ವಾನ್, ಅಕ್ರಂ, ಟಿಪ್ಪು ಕಮಿಟಿ ಅಧ್ಯಕ್ಷ ಎನ್.ಆರೀಫ್ ಉಲ್ಲಾ, ಫಾಯಿಕ್ ಅಹಮ್ಮದ್, ಇನಾಯತ್ ಪಾಷ, ಜುನೈದ್ ಇದ್ದರು.