ಚಾಮರಾಜನಗರ: ನಗರದ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರ ರಾತ್ರಿ ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಎಸ್ಡಿಪಿಐ ಜಿಲ್ಲಾ ಫಟಕದ ಪದಾಧಿಕಾರಿಗಳು, ಸಂತ್ರಸ್ತರ ಕುಟುಂಬದ ಸದಸ್ಯರೊಂದಿಗೆ ಗುರುವಾರ ರಾತ್ರಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಮುಂಭಾಗ ಸೇರಿದ ಪ್ರತಿಭಟನಕಾರರು ಕೈಯಲ್ಲಿ ಮೊಂಬತ್ತಿ ಹಾಗೂ ಮೃತಪಟ್ಟವರ ಭಾವಚಿತ್ರಗಳನ್ನು ಹಿಡಿದು, ಪ್ರತಿಭಟನೆ ನಡೆಸಿದರಲ್ಲದೆ, ಮೃತಪಟ್ಟವರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಿದರು
ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ‘ದುರ್ಘಟನೆಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ಘಟನೆ ನಡೆದ ದಿನದಿಂದಲೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಸಂತ್ರಸ್ತರ ಪರ ಹೋರಾಟ ನಡೆಸುತ್ತಿದೆ. ದುರಂತ ಸಂಧರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಂತ್ರಸ್ತರ ಪರ ನಿಲ್ಲಲಿಲ್ಲ’ ಎಂದು ದೂರಿದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಪರ ಇರುತ್ತದೆ’ ಎಂದು ಹೇಳಿದ್ದರು. ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಕೊಡುವ ಭರವಸೆಯನ್ನು ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿದಿದೆ. ಸಂತ್ರಸ್ತರಲ್ಲಿ ಕೆಲವರಿಗೆ ಮಾತ್ರ ಗುತ್ತಿಗೆ ಆಧಾರಿತ ಕೆಲಸವನ್ನು ಕೊಟ್ಟು ಸರ್ಕಾರ ಸಂತ್ರಸ್ತರಿಂದ ಅಂತರ ಕಾಯ್ದುಕೊಂಡಿದೆ’ ಎಂದರು.
‘ಕಾಂಗ್ರೆಸ್ನ ನಡೆ ಅತ್ಯಂತ ಖಂಡನೀಯ. ಸಂತ್ರಸ್ತ ಕುಟುಂಬಸ್ಥರರಲ್ಲಿ ಒಬ್ಬರಿಗೆ ಕಾಯಂ ಸರ್ಕಾರಿ ಉದ್ಯೋಗ ಕೊಡಬೇಕು. ಈ ದುರ್ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಸಂತ್ರಸ್ತರ ಕುಟುಂಬದ ಸದಸ್ಯರಾದ ಮಂಜುನಾಥ್, ರಮೇಶ್ ಬಾಬು, ಶಿವಣ್ಣ, ಮಹೇಶ್, ನಾಗರತ್ನ, ಸುಶೀಲಾ, ಸಿದ್ದರಾಜಮ್ಮ, ಸೌಮ್ಯ, ಸವಿತಾ, ಚರಿತಾ, ಶ್ವೇತಾ, ಎಸ್ಡಿಪಿಐ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು