ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಅಂಗೈಯಲ್ಲೇ ಅಂಗನವಾಡಿ!

ಪೋಷಣ ಅಭಿಯಾನ ಅನುಷ್ಠಾನ, ಅಂಗನವಾಡಿ ಕಾರ್ಯಕರ್ತೆಯರ ಕೈಗೆ ಸ್ಮಾರ್ಟ್‌ಫೋನ್‌
Last Updated 22 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪೋಷಣ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕರಿಗೆ ಸ್ಮಾರ್ಟ್‌ಫೋನ್‌ ವಿತರಣೆ ಮಾಡಲಾಗುತ್ತಿದ್ದು, ಅಂಗನವಾಡಿಯ ಕಾರ್ಯನಿರ್ವಹಣೆ ಇನ್ನು ಡಿಜಿಟಲ್‌ ರೂಪ ಪಡೆದುಕೊಳ್ಳಲಿದೆ.‌

ಮಕ್ಕಳ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆ ತಡೆಗಟ್ಟುವುದು ಹಾಗೂ ರಕ್ತಹೀನತೆ ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ತಗ್ಗಿಸುವುದು ‘ಪೋಷಣ ಅಭಿಯಾನ’ದ ಮುಖ್ಯ ಉದ್ದೇಶ. ಅಂಗನವಾಡಿಗಳ ಮೂಲಕ ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ‌

ಅಂಗನವಾಡಿಗೆ ಬರುವ ಮಕ್ಕಳು ಮತ್ತು ಗರ್ಭಿಣಿ/ಬಾಣಂತಿಯರ ಹಾಜರಾತಿ, ಸಮುದಾಯ ಆಧಾರಿತ ಚಟುವಟಿಕೆ, ಪೌಷ್ಟಿಕ ಆಹಾರ ವಿತರಣೆ, ಫಲಾನುಭವಿಗಳ ಸಮೀಕ್ಷೆಯ ಅಂಕಿ ಅಂಶ ಮತ್ತು ವಿವರಗಳನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಸ್ಮಾರ್ಟ್‌ಪೋನ್‌ಗಳನ್ನು ನೀಡಲು ನಿರ್ಧರಿಸಿದ್ದು, ರಾಜ್ಯದಲ್ಲಿ ಮೊದಲ ಹಂತದಲ್ಲಿ ಚಾಮರಾಜನಗರ ಸೇರಿದಂತೆ 19 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ‌‌

ಜಿಲ್ಲೆಯಲ್ಲಿ 1,420 ಅಂಗನವಾಡಿಗಳಿದ್ದು, ಅವುಗಳ ಎಲ್ಲ ಕಾರ್ಯಕರ್ತೆಯರಿಗೆ ಹಾಗೂ 55 ಮಂದಿ ಮೇಲ್ವಿಚಾರಕರು ಸೇರಿದಂತೆ ಒಟ್ಟು 1,475 ಮಂದಿಗೆ ಸ್ಮಾರ್ಟ್‌ಫೋನ್‌ ವಿತರಣೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ.

‘ಈಗಾಗಲೇ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಸಿಮ್‌ಗಳು ಬರಬೇಕಿದ್ದು, ಎರಡು ವಾರದೊಳಗೆ ವಿತರಣೆ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‌

ಸ್ಮಾರ್ಟ್‌ಫೋನ್‌ ಜತೆಗೆ ಪವರ್‌ ಬ್ಯಾಂಕ್‌, ಮೆಮೋರಿ ಕಾರ್ಡ್‌, ಬ್ಯಾಕ್‌ ಕೇಸ್‌, ಡಸ್ಟ್‌ ಪ್ರೂಫ್‌ ಕೇಸ್‌, ಸ್ಕ್ರೀನ್‌ ಪ್ರೊಟೆಕ್ಟರ್‌ ಮತ್ತು ಹೆಡ್‌ ಸೆಟ್‌ಗಳು ಕೂಡ ಇರಲಿವೆ. ದಿನಕ್ಕೆ ಒಂದು ಜಿಬಿ ಮೆಮೊರಿ ಸೌಲಭ್ಯವೂ ಇರಲಿದೆ ಎಂದು ಅವರು ಮಾಹಿತಿ ನೀಡಿದರು.

‌ಕಾರ್ಯನಿರ್ವಹಣೆ ಹೇಗೆ?: ವಿತರಿಸಲಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಇಂಟೆಗ್ರೇಟೆಡ್‌ ಚೈಲ್ಡ್‌ ಡೆವಲಪ್‌ಮೆಂಟ್‌ ಸರ್ವಿಸ್’ (ಐಸಿಡಿಎಸ್‌) ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಲಾಗುತ್ತದೆ. ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ದಿನ ನಡೆಯುವ ಚಟುವಟಿಕೆಗಳು ಹಾಗೂ ಮಾಹಿತಿಗಳನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ.

‌‘ಮಕ್ಕಳು, ಗರ್ಭಿಣಿ/ಬಾಣಂತಿಯರ ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಅಂಗನವಾಡಿಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಇದುವರೆಗೂ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲ ಮಾಹಿತಿಗಳನ್ನೂ ಪ್ರತಿ ದಿನ ಸ್ಮಾರ್ಟ್‌ಫೋನ್‌ನಲ್ಲಿ ದಾಖಲು ಮಾಡಬೇಕಾಗುತ್ತದೆ. ಮೇಲ್ವಿಚಾರಕರು ಹಾಗೂ ಅಧಿಕಾರಿಗಳು ತಮ್ಮ ಫೋನ್‌, ಕಂಪ್ಯೂಟರ್‌ಗಳ ಮೂಲಕ ಮಾಹಿತಿಯನ್ನು ಪಡೆಯಬಹುದು. ಒಂದರ್ಥದಲ್ಲಿ ಅಂಗನವಾಡಿಯ ಮಾಹಿತಿಗಳು ಇನ್ನು ಅಂಗೈನಲ್ಲೇ ಲಭ್ಯವಾಗಲಿದೆ’ ಎಂದು ಬಸವರಾಜು ಅವರು ಮಾಹಿತಿ ನೀಡಿದರು.

ತರಬೇತಿ: ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ವಿಧಾನಗಳ ಬಗ್ಗೆ ಕಾರ್ಯಕರ್ತೆಯರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಬಸವರಾಜು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT