ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಬಳಿ ಕುರಿಗಾಹಿಗಳ ಮೇಲೆ ಎರಗಿದ ಹುಲಿ: ಇಬ್ಬರಿಗೆ ಗಾಯ

Published 12 ಫೆಬ್ರುವರಿ 2024, 10:00 IST
Last Updated 12 ಫೆಬ್ರುವರಿ 2024, 10:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ ಹೊರವಲಯದ ಬಯಲಿನಲ್ಲಿ ಸೋಮವಾರ ಮಧ್ಯಾಹ್ನ ಮೇಕೆಗಳ ಮೇಲೆ ದಾಳಿ ಮಾಡಿದ ಹುಲಿಯನ್ನು ಓಡಿಸಲು ಯತ್ನಿಸಿದ ಇಬ್ಬರು ಕುರಿಗಾಹಿಗಳ ಮೇಲೆ ವ್ಯಾಘ್ರ ಎರಗಿದೆ. ಇಬ್ಬರಿಗೂ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ.

ಶಿವಪುರ ಗ್ರಾಮದ ಜವರಶೆಟ್ಟಿ ಮತ್ತು ಶಿವಶೆಟ್ಟಿ ದಾಳಿಯಲ್ಲಿ ಗಾಯಗೊಂಡವರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಎಂದಿನಂತೆ ನಾಲ್ಕೈದು ಜನರ ತಂಡ ಗ್ರಾಮದ ತೆಂಕತಟ್ಟು ಎಂಬ ಭಾಗದಲ್ಲಿ ಕುರಿ -ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಮೇಕೆಗಳ ದಾಳಿ ಮಾಡಿ ಒಂದು ಮರಿಯನ್ನು ಹಿಡಿಯಿತು. ಶಿವಶೆಟ್ಟಿ ಮತ್ತು ಜವರಶೆಟ್ಟಿ ಅವರು ಹುಲಿಯಿಂದ ಮೇಕೆ ಮರಿಯನ್ನು ಬಿಡಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಹುಲಿ ಇವರ ಮೇಲೆ ದಾಳಿ ಮಾಡಿದೆ. ಎದೆ, ಕೈ ಮಂಡಿ, ತೊಡೆ ಹಾಗೂ ಬೆನ್ನಿನ ಭಾಗಗಳಲ್ಲಿ ಗಾಯಗಳಾಗಿವೆ. ತಕ್ಷಣವೇ ನೆರೆಹೊರೆಯ ಜನರು ಗದರಿಸಿದ್ದರಿಂದ ಹುಲಿ ಕಾಡಿನ ಕಡೆಗೆ ಹೋಗಿದೆ’ ಎಂದು ಕುರಿಗಳನ್ನು ಮೇಯಿಸುತ್ತಿದ್ದ ಪುಟ್ಟಸಿದ್ದಯ್ಯ ತಿಳಿಸಿದರು.

‘ಹುಲಿ, ಮೇಕೆ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂದರೆ ಹುಲಿಗೆ ವಯಸ್ಸಾಗಿದ್ದು ಶಕ್ತಿ ಕಳೆದುಕೊಂಡು ಕಾಡಿನಿಂದ ಹೊರ ಬಂದಿರುವ ಸಾಧ್ಯತೆ ಇದೆ. ಈ ಹುಲಿಯಿಂದ ಮುಂದೆ ಹೆಚ್ಚಿನ ದಾಳಿಗಳಾಗಬಹುದು. ಆದ್ದರಿಂದ ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯಬೇಕು’ ಎಂದು ಮಂಗಲ ಗ್ರಾಮದ ಉಮೇಶ್ ತಿಳಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಕುರಿಮರಿಗಳನ್ನು ಮೇಯಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT