ಯಳಂದೂರು: ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳ ಗರಿಗೆದರಿದ್ದು, ಕೆಸರು ಮಣ್ಣು ತಯಾರಿಸಲು ಕೃಷಿಕರು ಮುಂದಾಗಿದ್ದಾರೆ.
ರೈತರು ಮಣ್ಣು ಹಸನುಗೊಳಿಸಲು ಮತ್ತು ಚಂಬೆ, ಸೆಣಬು ಉಳುಮೆ ಮಾಡಲು ಟ್ರಾಕ್ಟರ್ ಮತ್ತು ಟಿಲ್ಲರ್ ಬಳಕೆ ಹೆಚ್ಚಿಸಿದ್ದಾರೆ. ಆದರೆ, ಯಂತ್ರೋಪಕರಣದ ಬೆಲೆಯಲ್ಲಿ ಹೆಚ್ಚಳವಾಗಿದ್ದು, ರೈತರ ನಿರ್ವಹಣಾ ವೆಚ್ಚದಲ್ಲಿ ದಿಢೀರ್ ಏರಿಕೆಯಾಗಿದೆ.
‘ಭತ್ತದ ಸಸಿ ನಾಟಿಗೂ ಮೊದಲು, ಗದ್ದೆಯನ್ನು ಕೆಸರು ಮಾಡಬೇಕು. ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಸಾಗುವಳಿದಾರರು ತರಾತುರಿಯಲ್ಲಿ ಬೇಸಾಯ ಆರಂಭಿಸಿದ್ದಾರೆ. ಟ್ರಾಕ್ಟರ್ ಬಾಡಿಗೆ ಕಳೆದ ವರ್ಷ 1 ಗಂಟೆಗೆ ₹800 ರಿಂದ ₹1 ಸಾವಿರ ನಿಗಧಿಯಾಗಿತ್ತು. ಈ ಬಾರಿ ಬೆಲೆ ₹400ಕ್ಕೆ ಏರಿಕೆಯಾಗಿದೆ’ ಎಂದು ಕೃಷಿಕರು ದೂರಿದರು.
‘ಈ ಬಾರಿ ಟ್ರಾಕ್ಟರ್ಗೆ ಬೇಡಿಕೆ ಹೆಚ್ಚಿದೆ. ನಾಟಿ ಅವಧಿಯೂ ಕಡಿಮೆ ಇದೆ. ಹೆಚ್ಚಿನ ಹಿಡುವಳಿದಾರರು ಕೃಷಿಯಲ್ಲಿ ಯಂತ್ರ ಬಳಸಬೇಕಾದ ತುರ್ತು ಎದುರಾಗಿದೆ. ಇದನ್ನು ಮನಗಂಡ ಟ್ರಾಕ್ಟರ್ ಮಾಲೀಕರು 1 ಗಂಟೆಗೆ ಟ್ರಾಕ್ಟರ್ ಬಾಡಿಗೆ ದರವನ್ನು ₹1 ಸಾವಿರದಿಂದ ₹1400ಕ್ಕೆ ಏರಿಸಿದ್ದು, ಕೃಷಿಕರು ಹೆಚ್ಚಿನ ವೆಚ್ಚ ಭರಿಸಬೇಕಿದೆ. ಸಂಬಂಧಪಟ್ಟವರು ಏಕ ಪ್ರಕಾರದ ಬೆಲೆ ನಿಗಧಿ ಮಾಡಬೇಕು’ ಎನ್ನುತ್ತಾರೆ ಗೌಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ರೈತ ಪ್ರಕಾಶ್.