ಚಾಮರಾಜನಗರ: ತಾಲ್ಲೂಕಿನ ಹರವೆ ಗ್ರಾಮದ ಯುವಕರೊಬ್ಬರು ಸ್ನೇಹಿತರೊಂದಿಗೆಪುದುಚೇರಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ ಅಂಗಡಿ ಬಸಪ್ಪ ಎಂಬುವವರ ಪುತ್ರಬಿ.ದೀಪು (26) ಮೃತಪಟ್ಟವರು.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ದೀಪು ಅವರು ಎಂಟು ಮಂದಿ ಸ್ನೇಹಿತರೊಂದಿಗೆ ಪುದುಚೇರಿಗೆ ಪ್ರವಾಸ ಹೋಗಿದ್ದರು. ಅಲ್ಲಿನ ಬೀಚ್ ಒಂದರಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಇನ್ನೂ ಮೂವರು ಅಸ್ವಸ್ಥರಾಗಿದ್ದಾರೆ. ಯುವತಿಯೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದ್ದು, ಇನ್ನಿಬ್ಬರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.
ದೀಪು ಅವರ ಮೃತದೇಹವನ್ನು ಭಾನುವಾರ ತಡರಾತ್ರಿ ಹರವೆಗೆ ತರಲಾಯಿತು. ಸೋಮವಾರ ಬೆಳಿಗ್ಗೆ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.