ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ‘ಶಾಲೆಗಳ ಆಯಾ, ಮಾತೆಯರ ನೇಮಕಾತಿಯಲ್ಲಿ ಅವ್ಯವಹಾರ‘

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ, ತನಿಖೆಗೆ ಒಟ್ಟು
Last Updated 20 ನವೆಂಬರ್ 2020, 14:23 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸರ್ಕಾರಿ ಶಾಲೆಗಳಲ್ಲಿರುವ ಆಯಾ ಹಾಗೂ ಮಾತೆಯರ ನೇಮಕಾತಿಯಲ್ಲಿ ನಿಯಮ ಉಲ್ಲಂಘಿಸಲಾಗಿದೆ. ನಿವೃತ್ತಿ ವಯಸ್ಸು ಮೀರಿದವರನ್ನು ಈಗಲೂ ಕೆಲಸಕ್ಕೆ ಇಟ್ಟುಕೊಂಡು ಸಂಬಳ ನೀಡಲಾಗುತ್ತಿದೆ. ಅವರಿಂದ ಸರಿಯಾದ ದಾಖಲೆ ಪಡೆಯದೆ ನೇಮಕ ಮಾಡಿಕೊಂಡು ಈಗ ಆಧಾರ್‌ ಕಾರ್ಡ್‌ ಪಡೆದು ಅಕ್ರಮವನ್ನು ಮುಚ್ಚಿಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸದಸ್ಯರು, ‘ಸರ್ಕಾರದ ಹಣ ಅನಗತ್ಯವಾಗಿ ಪೋಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಪಟ್ಟು ಹಿಡಿದರು.

ಸಭೆಯಲ್ಲಿ, ಇತ್ತೀಚೆಗೆ ಈ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಎಸ್‌.ಟಿ.ಜವರೇಗೌಡ ಅವರೊಂದಿಗೆ ನಡೆಸಿದ ಸಭೆಯ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು, ‘ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 36 ಮಂದಿ ಆಯಾ ಹಾಗೂ 19 ಮಂದಿ ಶಾಲಾ ಮಾತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ವಾರ್ಷಿಕವಾಗಿ ಕ್ರಮವಾಗಿ ₹1.54 ಕೋಟಿ ಹಾಗೂ ₹81.60 ಲಕ್ಷ ವೇತನ ನೀಡಲಾಗುತ್ತಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನಾನು ಕಂಡುಕೊಂಡಂತೆ ಇವರ ನೇಮಕಾತಿಯಲ್ಲಿ ಹಗರಣ ಆಗಿದೆ’ ಎಂದು ಹೇಳಿದರು.

‘ನಿಯಮದ ಪ್ರಕಾರ, 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಕೆಲಸ ಮಾಡುವಂತಿಲ್ಲ. ಸೇವಾ ಅವಧಿಯಲ್ಲಿ ನಿಧನ ಹೊಂದಿದರೆ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಆದರೆ, ಇಲ್ಲಿ ಈ ಎರಡೂ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಇನ್ನೂ ಕೆಲಸ ಮಾಡುತ್ತಿದ್ದಾರೆ. ವಯಸ್ಸಿನ ದಾಖಲೆಗೆ ಇವರು ಆಧಾರ್ ಕಾರ್ಡ್‌ ನೀಡಿದ್ದಾರೆ. ಆದರೆ, ಆಧಾರ್‌ ಕಾರ್ಡ್‌ ಅಡಿಯಲ್ಲಿ ವಯಸ್ಸನ್ನು ದೃಢಪಡಿಸಲು ಸಾಧ್ಯವಿಲ್ಲ. ಅದನ್ನು ತಿದ್ದುಪಡಿ ಮಾಡುವುದಕ್ಕೂ ಅವಕಾಶ ಇದೆ’ ಎಂದು ಹೇಳಿದರು.

‘ನಾಲ್ಕೈದು ವರ್ಷಗಳಿಂದ ಇದು ನಡೆಯುತ್ತಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಗೊತ್ತಿದ್ದೂ, ಇಲ್ಲದವರಂತೆ ಇದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಒಂದು ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಶಶಿಕಲಾ ಅವರು ಹೇಳಿದರು.

ಸದಸ್ಯ ಕೆರೆಹಳ್ಳಿ ನವೀನ್‌ ಅವರು ಮಾತನಾಡಿ, ‘ಬಡವರ ಹೊಟ್ಟೆಯ ಮೇಲೆ ಹೊಡೆಯಬೇಕು ಎಂಬ ಕಾರಣಕ್ಕೆ ಈ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ. ಸರ್ಕಾರದ ಹಣ ಪೋಲಾಗಬಾರದು ಎಂಬ ಕಾಳಜಿಯಷ್ಟೇ. ನಿಯಮ ಉಲ್ಲಂಘನೆಯಾಗಬಾರದು. ಈಗ ಕರ್ತವ್ಯ ನಿರ್ವಹಿಸುತ್ತಿರುವವರ ಕುಟುಂಬದವರೋ ಅಥವಾ ಅವರ ಸಂಬಂಧಿಕರನ್ನಾದರೂ ನೇಮಕ ಮಾಡಿ. ಅದು ನಿಯಮ ಪ್ರಕಾರವಾಗಿರಲಿ. ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿಟ್ಟುಕೊಂಡು ನೇಮಕ ಮಾಡಿಕೊಳ್ಳುವುದು ಅಥವಾ ನಿವೃತ್ತಿಯಾಗಿದ್ದರೂ, ಕೆಲಸ ಮುಂದುವರಿಸುವುದು ಸರಿಯಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜವರೇಗೌಡ ಅವರು, ‘10 ಮಂದಿ ಆಯಾಗಳ ವಯಸ್ಸಿನ ಬಗ್ಗೆ ಅನುಮಾನ ಇದೆ. ಅವರ ವಯಸ್ಸಿನ ದೃಢೀಕರಣ ಮಾಡಿಕೊಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಇದೇ ವಿಚಾರವಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಇದರಿಂದ ಸಮಾಧಾನ ಆಗದ ಸದಸ್ಯ ಎಸ್‌.ಕೆ.ಮಹೇಶ್‌ ಅವರು, ‘ನಾಲ್ಕೂವರೆ ವರ್ಷಗಳಿಂದ ಈ ಸಮಸ್ಯೆ ಇದೆ. ಇನ್ನು ಆರು ತಿಂಗಳಲ್ಲಿ ನಮ್ಮ ಅವಧಿ ಮುಗಿಯುತ್ತದೆ. ಅಧಿಕಾರಿಗಳೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಸರಿಯಾದ ದಾಖಲೆಗಳಿಲ್ಲದೇ ಹೇಗೆ ನೇಮ‌ಕ ಮಾಡಿಕೊಂಡಿರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಸಮಜಾಯಿಷಿ ನೀಡಿದ ಡಿಡಿಪಿಐ, ‘ಕೆಲವರು 25–30 ವರ್ಷಗಳ ಹಿಂದೆಯೇ ನೇಮಕಾತಿ ಆಗಿದ್ದಾರೆ. ಆ ಸಂದರ್ಭದಲ್ಲಿ ದಾಖಲೆಗಳನ್ನು ಪಡೆದಿರುತ್ತಾರೆ. ಇತ್ತೀಚೆಗೆ ಆಧಾರ್‌ ಕಾರ್ಡ್‌ ನೀಡಿದ್ದಾರೆ’ ಎಂದರು.

ಸದಸ್ಯರಾದ ಚೆನ್ನಪ್ಪ, ಬೊಮ್ಮಯ್ಯ, ಕಮಲ್‌ ರಾಜ್‌ ಮತ್ತಿತರರು ಮಾತನಾಡಿ, ‘ಆಧಾರ್ ಕಾರ್ಡ್‌ನಲ್ಲಿ ವಯಸ್ಸನ್ನು ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇದೆ. ಹಾಗಾಗಿ ಆಧಾರ್ ಕಾರ್ಡ್‌ ದಾಖಲೆಯನ್ನು ಪರಿಗಣಿಸಬಾರದು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

15 ದಿನಗಳಲ್ಲಿ ವರದಿಗೆ ಸೂಚನೆ: ಜಿಲ್ಲಾ ಪಂಚಾಯಿತಿ ಮುಖ್ಯ ‌ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭೊಯರ್‌ ಹರ್ಷಲ್‌ ನಾರಾಯಣರಾವ್‌ ಅವರು ಮಾತನಾಡಿ, ‘ಇದು ಗಂಭೀರ ವಿಚಾರ. ನಿಯಮಗಳನ್ನು ಉಲ್ಲಂಘಿಸಬಾರದು. ಮುಂದೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯ ಇಲಾಖೆಯ ಅಭಿಪ್ರಾಯ ಪಡೆದು ಸಿಬ್ಬಂದಿಯ ವಯಸ್ಸನ್ನು ನಿಗದಿ ಪಡಿಸಿ 15 ದಿನಗಳ ಒಳಗೆ ತನಿಖೆ ನಡೆಸಿ ವರದಿ ನೀಡಬೇಕು’ ಎಂದು ಸೂಚಿಸಿದರು.

ಬಾಕಿ ಮೊತ್ತ ಪಡೆಯಲು ನಿರ್ಣಯ: ಜಿಲ್ಲಾ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ಶಿವಮ್ಮ ಅವರು ಬಳಸುತ್ತಿದ್ದ ಕಾರು ಅಪಘಾತವಾಗಿ ಅದರ ದುರಸ್ತಿಗೆ ಆಗಿರುವ ವೆಚ್ಚದಲ್ಲಿ ವಿಮೆ ಮೊತ್ತವನ್ನು ಬಿಟ್ಟು, ಉಳಿದ ಹಣವನ್ನು ಶಿವಮ್ಮ ಅವರ ಕೈಯಿಂದಲೇ ಪಡೆಯುವ ಸಂಬಂಧ ಸಭೆ ನಿರ್ಣಯ ಕೈಗೊಂಡಿದೆ.

ಶಿವಮ್ಮ ಅವರು 2018ರ ಅಕ್ಟೋಬರ್‌ನಲ್ಲಿ ಕುಟುಂಬದವರೊಂದಿಗೆ ಖಾಸಗಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗದ ಚಳ್ಳೆಕೆರೆ ಬಳಿ ಅಪಘಾತಕ್ಕೀಡಾಗಿತ್ತು. ದುರಸ್ತಿಗೆ ₹12 ಲಕ್ಷ ವೆಚ್ಚವಾಗಿತ್ತು. ₹6 ಲಕ್ಷ ವಿಮೆ ಬಂದಿತ್ತು. ಉಳಿದ ₹6 ಲಕ್ಷವನ್ನು ಪಾವತಿಸುವ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿತ್ತು. ಈಗ ಆ ಮೊತ್ತವನ್ನು ಶಿವಮ್ಮ ಅವರೇ ಪಾವತಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಕೋವಿಡ್‌ ನಿರ್ವಹಣೆ ಅವ್ಯವಹಾರ ತನಿಖೆಗೆ ಸಮಿತಿ

‘ಕೋವಿಡ್‌ ನಿರ್ವಹಣೆಗಾಗಿ ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿಯಲ್ಲಿ ಮಾಡಿದ ಖರೀದಿಯಲ್ಲಿ ಅವ್ಯಹಾರ ನಡೆದಿದೆ ಎಂದುಕಳೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಸಿ.ಎನ್‌.ಬಾಲರಾಜು ಅವರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವ ತೀರ್ಮಾನವನ್ನು ಸಭೆ ಕೈಗೊಂಡಿದೆ.

‘ಅವ್ಯವಹಾರ ನಡೆದಿಲ್ಲ. ಎಲ್ಲ ವೆಚ್ಚದ ವಿವರಗಳನ್ನು ಬಾಲರಾಜು ಅವರಿಗೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರೊಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಅವರು ಸಭೆಗೆ ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಸದಸ್ಯರು ಸಿಇಒ ಹಾಗೂ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಸಿಇಒ ನಾರಾಯಣರಾವ್‌ ಹಾಗೂ ಸದಸ್ಯ ಕೆ.ಎಸ್‌.ಮ‌ಹೇಶ್‌ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು.

‘ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದು ಸಮಿತಿ ರಚಿಸಿ ತನಿಖೆ ನಡೆಸಬೇಕು. ಆದರೆ, ಇಲ್ಲಿ ನೀವೇ, ಡಿ.ಲೇಖಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಯಾರ ಗಮನಕ್ಕೂ ತರದೆ ತನಿಖೆ ನಡೆಸಿದ್ದೀರಿ. ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಈ ರೀತಿ ಮಾಡುತ್ತಿದ್ದೀರಿ’ ಎಂದು ಮಹೇಶ್‌ ಆರೋಪಿಸಿದರು.

ಇದಕ್ಕೆ ಎದಿರೇಟು ನೀಡಿದ ಸಿಇಒ ಅವರು, ‘ಆರೋಪ ಮಾಡುವ ಉದ್ದೇಶ ಏನು? ಏನೂ ದಾಖಲೆಗಳಿಲ್ಲದೇ ದೂರುತ್ತಿದ್ದೀರಿ. ದಾಖಲೆಗಳನ್ನು ತಂದು ಮಾತನಾಡಿ. ನನ್ನ ಮೇಲುಸ್ತುವಾರಿಯಲ್ಲಿ ಖರೀದಿ ನಡೆದಿದೆ. ಅಗತ್ಯ ಬಿದ್ದರೆ ಇನ್ನೂ ಹಣ ಖರ್ಚು ಮಾಡುತ್ತೇವೆ. ನೀವು ಸಮಿತಿ ರಚಿಸಿ ತನಿಖೆ ನಡೆಸಿ’ ಎಂದರು.

ಅಧ್ಯಕ್ಷೆ ಅಶ್ವಿನಿ ಅವರು ಮಾತನಾಡಿ, ‘ಈ ಬಗ್ಗೆ ತನಿಖೆಗೆ ಸಮಿತಿ ರಚಿಸೋಣ. ಸದಸ್ಯರು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಿ’ ಎಂದರು.

ಅಂತಿಮವಾಗಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಲೇಖಾ ಅವರ ಅಧ್ಯಕ್ಷತೆಯಲ್ಲಿ, ಸಿ.ಎನ್‌.ಬಾಲರಾಜು, ಕೆ.ಎಸ್‌.ಮಹೇಶ್‌, ಬಿ.ಕೆ.ಮೊಮ್ಮಯ್ಯ ಮತ್ತು ಜೆ.ಯೋಗೇಶ್‌ ಅವರನ್ನು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT