ಸಂತೇಮರಹಳ್ಳಿ: ತೆಳ್ಳನೂರು ಗ್ರಾಮಕ್ಕೆ ಭೇಟಿ ನೀಡಿದರೆ ಕಸದ ರಾಶಿಗಳು ಸ್ವಾಗತಿಸುತ್ತವೆ. ರಸ್ತೆಯ ಇಕ್ಕೆಲಗಳು ಬಹಿರ್ದೆಸೆಯ ತಾಣವಾಗಿವೆ. ಇದರಿಂದ ಗ್ರಾಮದಲ್ಲಿ ನಿರ್ಮಲ ಭಾರತ್ ಯೋಜನೆ ಅನುಷ್ಠಾನ ಆಗಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಈ ರಸ್ತೆಯಲ್ಲಿ ನಡೆಯಬೇಕಾದರೆ ಮೂಗು ಮುಚ್ಚಿಕೊಂಡು ನಡೆಯಬೇಕು. ರಸ್ತೆಯ ಮಗ್ಗುಲಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಇರುವುದರಿಂದ ಮಕ್ಕಳು ಪ್ರತಿ ದಿನ ದುರ್ವಾಸನೆ ಸಹಿಸಿಕೊಂಡಿರಬೇಕಾದ ಪರಿಸ್ಥಿತಿ ಇದೆ.
ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿ ವ್ಯವಸ್ಥೆ ಇಲ್ಲದೇ ತ್ಯಾಜ್ಯ ನೀರು ಹರಿಯುತ್ತಿದೆ. ಸಮೀಪದಲ್ಲಿಯೇ ಕೈಪಂಪು ಇದ್ದು ಅದರ ತ್ಯಾಜ್ಯಮಯ ನೀರು ಕೂಡ ರಸ್ತೆ ಸೇರುತ್ತಿದೆ.
ಗ್ರಾಮದ ಮುಂಭಾಗ ನಿಂತ ಚರಂಡಿ ನೀರಿನಿಂದ ಸುತ್ತಲೂ ಕಳೆ ಗಿಡಗಳು ಬೆಳೆದುಕೊಂಡಿವೆ. ಜತೆಗೆ ಅನೈರ್ಮಲ್ಯಕ್ಕೂ ಕಾರಣವಾಗಿದೆ. ಕೊಚ್ಚೆ ನೀರಿನಿಂದ ಸೊಳ್ಳೆ ಕಾಟವೂ ಹೆಚ್ಚಾಗಿ, ರೋಗ ರುಜಿನುಗಳ ಭಯ ಹೆಚ್ಚಿದೆ.
ಗ್ರಾಮದೊಳಗಿನ ರಸ್ತೆ ವ್ಯವಸ್ಥೆ ಹದಗೆಟ್ಟಿದೆ. ಮಳೆಗಾಲದಲ್ಲಿ ನೀರು ನಿಂತಲ್ಲಿಯೇ ನಿಂತು ಜನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ.
ವಿದ್ಯುತ್ ಕಂಬಗಳಿಗೆ ಬಲ್್ಬ ಗಳನ್ನು ಅಳವಡಿಸಿದ ನಂತರ 2 ದಿನ ಉರಿಯುತ್ತದೆ. ನಂತರದ ದಿನಗಳಿಂದ ಬೀದಿ ದೀಪಗಳು ಉರಿಯುವುದಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ತಿರುಗಾಡುವುದು ಕಷ್ಟವಾಗಿದೆ ಎಂದು ನಿವಾಸಿಗಳು ದೂರುತ್ತಾರೆ.
ಇನ್ನಾದರೂ ಸಂಬಂಧಪಟ್ಟವರು ಚರಂಡಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡಬೇಕು ಎಂದು ಗ್ರಾಮದ ನಿವಾಸಿಗಳಾದ ರವೀಶ್, ಗುರುಸ್ವಾಮಪ್ಪ ಒತ್ತಾಯಿಸಿದ್ದಾರೆ.