ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಜ್ಞಾನ ವಿಕಾಸ ಕೇಂದ್ರದಿಂದ ಈಚೆಗೆ ‘ಮಕ್ಕಳ ನಡಿಗೆ ಪ್ರಕೃತಿ ಕಡೆಗೆ– -2013’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಕಾಂತರಾಜು, ವನ್ಯಜೀವಿಗಳ ಚಿತ್ರವನ್ನು ಚಿತ್ರಕಲೆ ಮೂಲಕ ತೋರಿಸುವುದು, ಮ್ಯೂಸಿಯಂನಲ್ಲಿದ್ದ ವಿವಿಧ ಪ್ರಾಣಿಗಳ ಪರಿಚಯ ಮಾಡಿಸುವುದು, ಅರಣ್ಯ ನಾಶದಿಂದ ವನ್ಯಜೀವಿಗಳ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಿ ಅರಣ್ಯ ಸಂರಕ್ಷಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಏನು? ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಎಲೆ ಗುರುತಿಸುವಿಕೆ, ರಸಪ್ರಶ್ನೆ ಮತ್ತು ಮರಗಿಡಗಳ ಹೆಸರು ಬರೆಯಿಸಿ ಬಹುಮಾನ ನೀಡಲಾಯಿತು. ಮ್ಯೂಸಿಯಂನಲ್ಲಿರುವ ವಿವಿಧ ಪ್ರಾಣಿಗಳ ಚಿತ್ರಣಗಳು, ಅವುಗಳ ಹೆಜ್ಜೆ ಗುರುತು ಹಾಗೂ ವಿವಿಧ ವಿಷಯಗಳ ಬಗ್ಗೆ ವಿವರಣೆ ನೀಡಲಾಯಿತು. ನಾರಾಯಣಸ್ವಾಮಿ, ಅರಣ್ಯ ರಕ್ಷಕ ಕುಮಾರಸ್ವಾಮಿ, ಅರಣ್ಯಾಧಿಕಾರಿ ಮರಡಿಮನಿ, ಪ್ರೀತಿ, ಶಾಂತಮಲ್ಲಪ್ಪ, ಜ್ಯೋತಿ, ಚೈತ್ರ, , ಉಮಾ, ವನ್ಯಜೀವಿ ಪರಿಪಾಲಕ ರಾಜಕುಮಾರ್, ಗೋಪಾಲಕೃಷ್ಣ, ರೈತ ಸಂಘದ ಸದಸ್ಯರು ಇದ್ದರು.
ಅರ್ಜಿ ಆಹ್ವಾನ
ಗುಂಡ್ಲುಪೇಟೆ: ತಾಲ್ಲೂಕಿನ ಅಂಗನವಾಡಿಯಲ್ಲಿ 4 ಅಂಗನವಾಡಿ ಕಾರ್ಯಕರ್ತೆಯರು ಮತ್ತು 7 ಸಹಾಯಕಿಯ ಹುದ್ದೆಗೆ ಶಿಶು ಅಭಿವೃದ್ಧಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ಅರ್ಹ ಸ್ಥಳೀಯ ಮಹಿಳೆಯರು ದಾಖಲಾತಿಗಳೊಂದಿಗೆ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜ. 6 ಕೊನೆ ದಿನ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮದ್ದಾನಸ್ವಾಮಿ ತಿಳಿಸಿದ್ದಾರೆ.
ನಾಗರತ್ನಮ್ಮ ಕಾಲೊನಿ (ಪರಿಶಿಷ್ಟ ಪಂಗಡ), ಭೋಗಯ್ಯನಹುಂಡಿ (ಇತರೆ), ದೇಶಿಪುರ ಕಾಲೊನಿ (ಇತರೆ), ಅಣ್ಣೂರು (ಪರಿಶಿಷ್ಟ ಜಾತಿ), ರಂಗನಾಥಪುರ (ಇತರೆ), ರಂಗೂಪುರ (ಇತರೆ), ರಾಘವಾಪುರ (ಇತರೆ), ಕುಣಗಳ್ಳಿ (ಸೋಲಿಗರ ಬೀದಿ) (ಪರಿಶಿಷ್ಟ ಪಂಗಡ), ಸವಕನಹಳ್ಳಿ (ಪರಿಶಿಷ್ಟಜಾತಿ), ಮೂಡಗೂರು (ಪರಿಶಿಷ್ಟ ಪಂಗಡ) ಗ್ರಾಮಗಳ ಅಂಗನವಾಡಿಗಳಲ್ಲಿ ಹುದ್ದೆಗಳು
ಖಾಲಿ ಇವೆ.