ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ನಲ್ಲಿ ಚಾಮರಾಜನಗರ ಜಿಲ್ಲೆಗೆ ಹೆಚ್ಚು ಕೊಡುಗೆಗಳಿಲ್ಲ.
ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ₹50 ಕೋಟಿಯಷ್ಟು ಅನುದಾನದ ಹಂಚಿಕೆಯ ಪ್ರಸ್ತಾಪ ಬಿಟ್ಟರೆಇಡೀ ಬಜೆಟ್ನಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ದೊಡ್ಡಮಟ್ಟಿನ ಬೇರೆ ಘೋಷಣೆಗಳಿಲ್ಲ. ಪ್ರಸ್ತಾವಿತ ಆಸ್ಪತ್ರೆಯ ಬಗ್ಗೆ ಸಿದ್ದರಾಮಯ್ಯ ಅವರು ಹಿಂದಿನ ಬಜೆಟ್ನಲ್ಲಿ₹100 ಕೋಟಿ ಹಂಚಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು. ₹90 ಕೋಟಿ ತಕ್ಷಣ ಬಿಡುಗಡೆ ಮಾಡಲೂ ಅನುಮತಿ ನೀಡಿದ್ದರು.ಅಂದು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದ ಎಂ.ಸಿ. ಮೋಹನಕುಮಾರಿ ಅವರು ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿಸಿದ್ದರು.
ಗುರುವಾರ ಮಂಡಿಸಲಾದ ಹೊಸ ಬಜೆಟ್ನಲ್ಲಿ ಗದಗ, ಕೊಪ್ಪಳ, ಚಾಮರಾಜನಗರ ಮತ್ತು ಹಾಸನಗಳಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ₹200 ಕೋಟಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ, ಜಿಲ್ಲೆಗೆ ₹50 ಕೋಟಿ ಸಿಗಬಹುದು ಎಂಬ ನಿರೀಕ್ಷೆ ಇದೆ.
ವಾಯು ಗುಣಮಟ್ಟ ಅಳೆಯುವ ಕೇಂದ್ರ: ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ₹96 ಕೋಟಿ ವೆಚ್ಚದಲ್ಲಿ 42ವಾಯುಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ತಾಪಿಸುವ ಪ್ರಸ್ತಾವವೂ ಬಜೆಟ್ನಲ್ಲಿ ಇದೆ. ಹಾಗಾಗಿ, ಜಿಲ್ಲೆಯಲ್ಲೂ ಕನಿಷ್ಠ ಒಂದು ವಾಯುಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಯಾಗುವುದು ಖಚಿತ.
ಪ್ರಸ್ತುತ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ವೃದ್ಧಾಶ್ರಮಗಳನ್ನು ಉಪವಿಭಾಗಗಳಿಗೂ ವಿಸ್ತರಿಸಲಿರುವುದರಿಂದ, ಜಿಲ್ಲೆಯಲ್ಲಿ ಇನ್ನೊಂದುವೃದ್ಧಾಶ್ರಮ ನಿರ್ಮಾಣವಾಗುವುದನ್ನು ನಿರೀಕ್ಷಿಸಬಹುದಾಗಿದೆ.