ಗೌರಿಬಿದನೂರು: ನಗರಸಭೆ ಅಧ್ಯಕ್ಷೆ ಕೆ.ಎಂ. ಗಾಯತ್ರಿ ಬಸವರಾಜ್ ಮಂಗಳವಾರ ನಗರದಲ್ಲಿ ಪೌರಕಾರ್ಮಿಕರನ್ನು ಭೇಟಿ ಮಾಡಿ ಅವರ ಕಾರ್ಯ ಯೋಜನೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ವರ್ಷದ ಎಲ್ಲಾ ದಿನಗಳಲ್ಲೂ ಬಿಡುವಿಲ್ಲದೆ ಪೌರಕಾರ್ಮಿಕರು ಕೆಲಸ ಮಾಡುತ್ತಾರೆ. ಸ್ವಚ್ಛತಾ ಕಾರ್ಯ ಹಾಗೂ ನೀರು ಸರಬರಾಜು ಸೇರಿದಂತೆ ಇತರೇ ಶ್ರಮಿಕ ಕಾರ್ಯಗಳ ಮೂಲಕ ನಗರದ ನೈರ್ಮಲ್ಯ ಕಾಪಾಡಲು ಶ್ರಮಿಸುತ್ತಾರೆ. ಆ ಮೂಲಕ ಜನರ ಆರೋಗ್ಯ ಸುಸ್ಥಿರವಾಗಿರಲು ಸಹಕಾರಿಯಾಗಿದ್ದಾರೆ ಎಂದರು.
ಪೌರಕಾರ್ಮಿಕರು ಅವಿರತವಾದ ಕಾರ್ಯದ ಜತೆಗೆ ವೈಯಕ್ತಿಕ ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಸರ್ಕಾರದಿಂದ ಪೌರಕಾರ್ಮಿಕರ ಅಭ್ಯುದಯಕ್ಕಾಗಿ ಲಭ್ಯವಿರುವ ಪ್ರತಿಯೊಂದು ಸೌಲಭ್ಯವನ್ನು ಕಲ್ಪಿಸಲಾಗುವುದು. ಜತೆಗೆ ಅವರ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನಗರಸಭೆಯಿಂದ ಉತ್ತಮ ಸವಲತ್ತು ಒದಗಿಸಲಾಗುವುದು ಎಂದು ಹೇಳಿದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಸುರೇಶ್ ಮತ್ತು ಸುಜಾತಾ ಪೌರಕಾರ್ಮಿಕರು ಹಾಗೂ ಅವರ ಕಾರ್ಯ ಚಟುವಟಿಕೆ ಬಗ್ಗೆ ಪರಿಚಯಿಸಿದರು.
ಪೌರಕಾರ್ಮಿಕರು ನೂತನ ಅಧ್ಯಕ್ಷೆ ಗಾಯತ್ರಿ ಬಸವರಾಜ್ ಅವರಿಗೆ ಪುಷ್ಪಮಾಲೆ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ಸದಸ್ಯರಾದ ಖಲೀಂ ಉಲ್ಲಾ, ಗೋಪಿನಾಥ್ ಹಾಜರಿದ್ದರು.