ಚಿಕ್ಕಬಳ್ಳಾಪುರ: ‘ಒಂದೆಡೆ ಮೇವಿಗೆ ಬರ, ದುಬಾರಿಯಾಗುತ್ತಿರುವ ಪಶು ಆಹಾರ, ಇನ್ನೊಂದೆಡೆ ಹಾಲಿಗೆ ಬೆಲೆ ಕಡಿಮೆ ಇರುವುದರಿಂದ ರೈತರು ನಷ್ಟ ಅನುಭವಿಸುವಂತಾಗುತ್ತಿದೆ. ಹೈನುಗಾರರ ಹಿತ ಕಾಯುವ ನಿಟ್ಟಿನಲ್ಲಿ ಒಂದು ಲೀಟರ ಹಾಲಿನ ದರವನ್ನು ₹35ಕ್ಕೆ ಹೆಚ್ಚಿಸುವಂತೆ ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್) ಮನವಿ ಮಾಡಲಾಗುತ್ತದೆ’ ಎಂದು ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್ ಹೇಳಿದರು.
ತಾಲ್ಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಳೆಯ ಜೂಜಾಟದಿಂದಾಗಿ ಇವತ್ತು ಕೃಷಿಯಲ್ಲಿ ರೈತರಿಗೆ ನಿಶ್ಚಿತ ಆದಾಯ ಸಿಗುತ್ತಿಲ್ಲ. ನೀರು, ವಿದ್ಯುತ್ ಸಮಸ್ಯೆ, ಕೃಷಿ ಉತ್ಪನ್ನಗಳ ದರಗಳ ಏರಿಳಿತದಿಂದಾಗಿ ಬೇಸಾಯ ಲಾಭದಾಯಕ ಕಸುಬಾಗಿ ಉಳಿದಿಲ್ಲ. ಕೃಷಿಯೊಂದಿಗೆ ಹೈನುಗಾರಿಕೆ ಅಳವಡಿಸಿಕೊಂಡರೆ ರೈತರು ಉತ್ತಮ ಆದಾಯದ ಜತೆಗೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು’ ಎಂದು ತಿಳಿಸಿದರು.
‘ಕೋಚಿಮುಲ್ನಿಂದ ಸಿಗುವ ರಾಸು ವಿಮೆ, ಮೇವಿನ ಬೀಜಗಳು, ಜೀವ ವಿಮೆ ಸಲವತ್ತುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಹೈನೋಧ್ಯಮ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು. ಹಾಲಿನ ದರ ಮತ್ತು ಪ್ರೋತ್ಸಾಹ ಧನ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡರೆ ಹೈನುಗಾರರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.
ನಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಹಾಲು ಇಲ್ಲದೇ ಜೀವನ ಇಲ್ಲ. ಜಿಲ್ಲೆಯಲ್ಲಿನ ಹೈನುಗಾರರು ಹಾಲು ಮಾರಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಹೀಗಾಗಿ ಒಕ್ಕೂಟ ಹಾಲಿನ ದರವನ್ನು ಹೆಚ್ಚಳ ಮಾಡಬೇಕು. ಜನರು ಪರಿಪೂರ್ಣ ಆಹಾರವಾದ ಹಾಲಿನ ಬಗ್ಗೆ ತಿಳಿಯದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅರಿವು ಅಗತ್ಯ. ಎಲ್ಲರೂ ಹಾಲನ್ನು ಹೆಚ್ಚು ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
ನಾಯನಹಳ್ಳಿ ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ರೂಭಿ ಕುಮುರು, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷರಾದ ಪಿ.ನಾರಾಯಣಸ್ವಾಮಿ, ಎಸ್.ನಾರಾಯಣಸ್ವಾಮಿ, ಆರ್.ಶ್ರೀನಿವಾಸ್, ಕೋಚಿಮುಲ್ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ತಿಪ್ಪಾರೆಡ್ಡಿ, ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಪಾಪೇಗೌಡ, ಒಕ್ಕೂಟದ ವಿಸ್ತರಣಾಕಾರಿಗಳಾದ ರಮೇಶ್ ಬಾಬು, ಸದಾಶಿವ, ಪಾಪಣ್ಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.