ಶಿಡ್ಲಘಟ್ಟ: ದುಶ್ಚಟಗಳಿಂದ ದೂರವಿರಿ. ಉತ್ತಮ ಲೇಖಕರ ಪುಸ್ತಕಗಳನ್ನು ಓದುವ, ಅನುಭವಗಳನ್ನು ದಾಖಲಿಸುವ, ಪ್ರವಾಸ, ಛಾಯಾಗ್ರಹಣ, ಚಿತ್ರಕಲೆ, ನೃತ್ಯ, ಡಿಜಿಟಲ್ ಮೂಲಕ ಪ್ರಯೋಗಶೀಲತೆ, ಗಿಡ ಬೆಳೆಸುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದು ಶಿರಸ್ತೇದಾರ್ ಮಂಜುನಾಥ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಭಾಗವಾಗಬೇಕು. ಹವ್ಯಾಸಗಳು ಇತರ ಕೆಲಸಗಳ ಹಾಗಲ್ಲ, ಅವು ಯಾವತ್ತಿಗೂ ಮನಸ್ಸಿಗೆ ಹತ್ತಿರವಾಗುವುದರಿಂದ ನಮಗೆ ಸಂತೋಷವನ್ನೇ ಕೊಡುತ್ತವೆ. ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಸಮಯವನ್ನು ಹವ್ಯಾಸಗಳಿಗೆ ಕೊಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರಿ ಚೈತನ್ಯ ತಂದುಕೊಡುತ್ತವೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಎನ್ಎಸ್ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಮಾತನಾಡಿದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ 50 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ 30 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಡಾಲ್ಫಿನ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಶೋಕ್, ಬಿಆರ್ಸಿಯ ಪ್ರಭಾಕರ್, ಭಾಸ್ಕರ್, ಮುನಿಶಾಮಪ್ಪ, ಎನ್ಎಸ್ಯುಐ ರಾಜ್ಯ ಮುಖಂಡ ಲಿಯಾಕತ್ ಉಲ್ಲಾ, ತಾಲ್ಲೂಕು ಮುಖಂಡರಾದ ಲಕ್ಷ್ಮಿನರಸಿಂಹ, ಪ್ರಸನ್ನ, ರಫೀಕ್ ಹಾಜರಿದ್ದರು.