ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿ: ಶಾಸಕ ಬಿ.ಎನ್. ರವಿಕುಮಾರ್

Published 2 ಜೂನ್ 2023, 13:14 IST
Last Updated 2 ಜೂನ್ 2023, 13:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. 

ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ‘ಅಧಿಕಾರಿಗಳು ಯಾವುದೇ ರಾಜಕೀಯ ಮುಖಂಡರು ಅಥವಾ ಬೇರಾವುದೇ ಮುಲಾಜಿಗೆ ಒಳಗಾಗದೆ ಕೆಲಸ ಮಾಡಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಕ್ಷೇತ್ರದ ಜನರ ಕಷ್ಟಗಳು ಬಗೆಹರಿಯಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಸಾಮಾನ್ಯ ಜನರಿಂದ ಯಾವುದೇ ಇಲಾಖೆ ಬಗ್ಗೆ ದೂರು ಬರಬಾರದು’ ಎಂದು ತಿಳಿಸಿದರು. 

‘ಈ ಹಿಂದೆ ಏನು ನಡೆಯಿತು. ಅಕ್ರಮ ಸಕ್ರಮಗಳ ಬಗ್ಗೆ ನಾನು ಚರ್ಚಿಸುವುದಿಲ್ಲ. ಮುಂದೆ ಆಗಬೇಕಾದ ಕೆಲಸಗಳು ಬಹಳ ಮುಖ್ಯ. ಯಾವುದೇ ಇಲಾಖೆಯಲ್ಲೂ ಅವ್ಯವಹಾರ, ಮಧ್ಯವರ್ತಿಗಳ ಹಾವಳಿ ಇರಬಾರದು. ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸಬೇಕು. ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಪಕ್ಕಕ್ಕಿಟ್ಟಿದ್ದೇವೆ. ಇನ್ನೇನಿದ್ದರೂ ಅಭಿವೃದ್ಧಿ. ಜನರ ಕೆಲಸಗಳು ತ್ವರಿತವಾಗಿ ನಡೆಯಬೇಕು ಮತ್ತು ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಪ್ರತಿಯೊಂದು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ, ಯೋಜನೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಮುಖ್ಯವಾಗಿ ಇಲಾಖೆಗಳಿಂದ ಜನರಿಗೆ ತಲುಪಿದ ಸೌಲಭ್ಯಗಳ ಮಾಹಿತಿ ತಂದುಕೊಡಿ ಎಂದರು.

ತಾಲ್ಲೂಕು ಕಚೇರಿಯಲ್ಲಿ ಇ.ಸಿ (ಎನ್ಕಂಬರೆನ್ಸ್ ಸರ್ಟಿಫಿಕೇಟ್)(ಹೊರೆ ಪ್ರಮಾಣಪತ್ರ) ಪಡೆಯಲು ಬರುವ ರೈತರಿಗೆ ತಾಂತ್ರಿಕ ಜ್ಞಾನ ಇರುವುದಿಲ್ಲ. ಆತ ಮಧ್ಯವರ್ತಿಗಳಿಂದ ಹಣ ಕಳೆದುಕೊಳ್ಳದ ಹಾಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಮುಂತಾದ ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ತಲುಪಲಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒತ್ತಡ ಅಥವಾ ಆಮಿಷಗಳಿಗೆ ಒಳಗಾಗಿ ಅಧಿಕಾರಿಗಳು ಕೆಲಸ ಮಾಡಬಾರದು ಎಂದರು. 

ಆರೋಗ್ಯ: ಸರ್ಕಾರಿ ಆಸ್ಪತ್ರೆಗಳಿಗೆ ನಾನೇ ಖುದ್ದಾಗಿ ಬಂದು ಅಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ತಾಲ್ಲೂಕಿನಲ್ಲಿರುವ ಡೈಯಾಲಿಸಿಸ್ ಪಡೆಯುವವರ ಪಟ್ಟಿ ತಯಾರಿಸಬೇಕು. ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೇವೆ ಸಿಗಬೇಕು ಎಂದರು.

ಶುದ್ಧ ನೀರಿನ ಘಟಕ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಪಿಡಿಒಗಳೊಂದಿಗೆ ಸಭೆ ನಡೆಸಬೇಕು. ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರಬೇಕು. ಒಳ್ಳೆಯ ನೀರು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂದರು.

ಕಾರ್ಮಿಕರಿಗೆ ಸೌಲಭ್ಯ: ಕಾರ್ಮಿಕ ಇಲಾಖೆಯಿಂದ ನಿಜವಾದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ರೇಷ್ಮೆ ಕಾರ್ಖಾನೆಗಳಲ್ಲಿ ದುಡಿಯುವವರು ಅದರಲ್ಲೂ ಹೆಣ್ಣುಮಕ್ಕಳು, ಆಸ್ತಮಾ ಸೇರಿದಂತೆ ಹಲವು ಕಾಯಿಲೆಗಳಿಂದ ನರಳುತ್ತಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಡವರಿಗೆ ಪ್ರಾಮಾಣಿಕವಾಗಿ ನೆರವಾಗಬೇಕು ಎಂದರು.

ಜನಸಾಮಾನ್ಯರು ತೊಂದರೆ, ಸಮಸ್ಯೆಗಳಾದಾಗ ಪೊಲೀಸರ ಬಳಿ ಬರುತ್ತಾರೆ. ಅವರೊಂದಿಗೆ ಸೌಜನ್ಯವಾಗಿ ಮಾತನಾಡಿ, ಸಮಸ್ಯೆ ಬಗೆಹರಿಸಿ. ಕೆಟ್ಟ ಸಂಗತಿಗಳು ನಡೆಯದಂತೆ, ತಪ್ಪುಗಳು ಆಗದಂತೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ. ಜನಸಾಮಾನ್ಯರು ನೆಮ್ಮದಿಯಿಂದ ಇರಬೇಕಷ್ಟೇ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಆಶಾಲತಾ, ಇಒ ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

‘ಮಕ್ಕಳು ಶಿಕ್ಷಣ ವಿಚಾರದಲ್ಲಿ ರಾಜಿ ಇಲ್ಲ’ ಶಿಡ್ಲಘಟ್ಟದಲ್ಲಿ ಕೆರೆ ಏರಿಯಿಂದ ಪ್ರಾರಂಭವಾಗಿ ಬೈಪಾಸ್ ರಸ್ತೆ ಮೂಲಕ ಮಯೂರ ವೃತ್ತದವರೆಗಿನ ರಸ್ತೆಯಲ್ಲಿ ಮಳೆ ನೀರು ನಿಲ್ಲದ ಹಾಗೆ ಕ್ರಮ ವಹಿಸಬೇಕು. ತ್ಯಾಜ್ಯಗಳು ಸುರಿಯದಂತೆ  ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಂಗನವಾಡಿ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಅವರಿಗೆ ಉತ್ತಮ ಆಹಾರ ಸೌಲಭ್ಯ ನೀಡಬೇಕು. ಮಕ್ಕಳು ಮತ್ತು ಶಿಕ್ಷಣದ ವಿಷಯದಲ್ಲಿ ರಾಜಿ ಆಗುವುದಿಲ್ಲ. ಏನಾದರೂ ಸಮಸ್ಯೆಗಳಿದ್ದಲ್ಲಿ ಬಂದು ಬಗೆಹರಿಸಿಕೊಳ್ಳಬೇಕು ಎಂದರು. ‘ಶಿಡ್ಲಘಟ್ಟ ಕ್ಷೇತ್ರವು ಜಿಲ್ಲೆ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಲು ಶಿಕ್ಷಕರು ಮತ್ತು ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಬೇಕು. ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸೋಣ. ಮಕ್ಕಳ ಭವಿಷ್ಯ ಉಜ್ವಲವಾಗಬೇಕು’ ಎಂದರು.

ವಿದ್ಯಾವಂತರಿಗೆ ಕೆಲಸ ನೀಡಲು ಸಲಹೆ ಪಶುಪಾಲನಾ ಇಲಾಖೆ ರೇಷ್ಮೆ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಇಲಾಖೆ ಅಧಿಕಾರಿಗಳು ಶಾಸಕರಿಗೆ ಕೋರಿದರು.  ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಇಲಾಖೆಗಳು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸ್ಥಳೀಯ ವಿದ್ಯಾವಂತರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಸೂಚಿಸಿದರು. ಅರಣ್ಯ ಇಲಾಖೆಯವರು ಪರಿಸರ ದಿನವೆನ್ನುತ್ತಾ ಕೇವಲ ಗಿಡ ನೆಟ್ಟರೆ ಸಾಲದು. ಎಷ್ಟು ಗಿಡ ಉಳಿದಿವೆ ಎಂಬ ಬಗ್ಗೆ ಗಮನ ಹರಿಸಬೇಕು. ಗಿಡ ನೆಟ್ಟಿದ್ದನ್ನು ಪೋಷಿಸುವ ಕೆಲಸವಾಗಬೇಕು. ಈಗಾಗಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಮಾರ್ಗಗಳಲ್ಲಿ ಬಸ್ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗಬಾರದು ಎಂದರು.  ಪೊಲೀಸರು ಜನರ ಬಳಿ ಸೌಜನ್ಯಯುತವಾಗಿ ನಡೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಕೆಟ್ಟ ಸಂಗತಿಗಳು ನಡೆಯದಂತೆ ತಪ್ಪುಗಳು ಆಗದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ. ಜನಸಾಮಾನ್ಯರು ನೆಮ್ಮದಿಯಿಂದ ಇರಬೇಕಷ್ಟೇ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT