ಚಿಂತಾಮಣಿ: ಇಲ್ಲಿನ ನಗರಸಭೆಯ 2024-25ನೇ ಸಾಲಿಗೆ ₹78 ಲಕ್ಷ ಉಳಿತಾಯ ಬಜೆಟನ್ನು ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಂಗಳವಾರ ಮಂಡಿಸಿದರು.
ಅಂದಾಜು ಆದಾಯ ₹86,92,51,000, ಅಂದಾಜು ವೆಚ್ಚ ₹86,14, 51,000 ಹಾಗೂ ₹78 ಲಕ್ಷ ಉಳಿತಾಯ ತೋರಿಸಲಾಗಿದೆ.
ಬಜೆಟ್ನಲ್ಲಿ ಕುಡಿಯುವ ನೀರು, ಬೀದಿದೀಪ, ರಸ್ತೆ ಹಾಗೂ ಚರಂಡಿ ನಿರ್ವಹಣೆ, ಉದ್ಯಾನ ಹಸಿರೀಕರಣ, ಸಾರ್ವಜನಿಕ ಸೌಲಭ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದವರ ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗಿದೆ.
ಬಜೆಟ್ ಮಂಡನೆಗೂ ಮುನ್ನ ನೀರಿನ ಸಮಸ್ಯೆ ಬಗೆಹರಿಸುವಂತೆ ಸದಸ್ಯರು ಒತ್ತಾಯಿಸಿದರು. ಪೌರಕಾರ್ಮಿಕರಿಗೆ ಬಾಕಿ ವೇತನ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ಸದಸ್ಯರು ಮನವಿ ಮಾಡಿದರು.
ಕಳೆದ ವರ್ಷದ ಬಜೆಟ್ನಲ್ಲಿ ಬೀದಿ ದೀಪ, ಕುಡಿಯುವ ನೀರು, ರಸ್ತೆ, ಚರಂಡಿ ನಿಗದಿಪಡಿಸಿದ್ದ ಆದಾಯ, ಖರ್ಚು, ಉಳಿತಾಯ ವಿವರಗಳನ್ನು ನೀಡಬೇಕು. ನಗರದ ಹಲವಾರು ಕಡೆ ಬೀದಿದೀಪಗಳಿಗೆ ಅಗತ್ಯ ಪರಿಕರಗಳಿಲ್ಲ ಎಂದು ಸದಸ್ಯ ಅಕ್ಷಯಕುಮಾರ್ ಹೇಳಿದರು.
ಆದಾಯ: ನಗರಸಭೆಯ ಸಿಬ್ಬಂದಿಯ ವೇತನ ಅನುದಾನ ₹3.75ಕೋಟಿ, ಅಂಗಡಿ ಮಳಿಗೆಗಳಿಂದ ಬಾಡಿಗೆ 2.10 ಕೋಟಿ, ನಗರಸಭೆ ನಿಧಿ ಮಳಿಗೆಗಳಿಂದ ₹65 ಲಕ್ಷ, ಹೊಸ ಬಡಾವಣೆ ಅಭಿವೃದ್ಧಿ ಶುಲ್ಕ ₹50 ಲಕ್ಷ, ಸಾರ್ವಜನಿಕ ಶೌಚಾಲಯ ಮತ್ತು ಪೆಟ್ರೋಲ್ ಬಂಕ್ ಬಾಡಿಗೆ ₹1.50 ಕೋಟಿ ನಿರೀಕ್ಷಿಸಲಾಗಿದೆ.
ನಗರಸಭೆಯ ನೀರಿನ ತೆರಿಗೆ ₹2.10 ಕೋಟಿ, ಒಳಚರಂಡಿ ಸಂಪರ್ಕ ಮತ್ತು ಸೇವಾ ಶುಲ್ಕ ₹1.5 ಕೋಟಿ, ನಲ್ಮ್ ಯೋಜನೆಯ ಅನುದಾನ ₹2.75ಕೋಟಿ, ನಗರಸಭೆಗೆ ಬ್ಯಾಂಕ್ ಬಡ್ಡಿಯಿಂದ ₹50 ಲಕ್ಷ, ಆಸ್ತಿ ತೆರಿಗೆ ₹10 ಕೋಟಿ, ಆಸ್ತಿ ತೆರಿಗೆ ದಂಡ ₹75 ಲಕ್ಷ, ಕಸ ಸಂಗ್ರಹಣೆ ಶುಲ್ಕ ₹40 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ.
ವೆಚ್ಚ: ನೌಕರರ ವೇತನ ₹5.32ಕೋಟಿ, ಲೋಕೋಪಯೋಗಿ ಕಾಮಗಾರಿಗೆ ₹20 ಲಕ್ಷ, ಬೀದಿದೀಪ ನಿರ್ವಹಣಾ ವೆಚ್ಚ ₹40 ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವೆಚ್ಚ ₹98 ಲಕ್ಷ, ಕುಡಿಯುವ ನೀರಿನ ನಿರ್ವಹಣೆಗಾಗಿ ₹3.70ಕೋಟಿ, ಒಳಚರಂಡಿ ನಿರ್ವಹಣೆ ವೆಚ್ಚ ₹55 ಲಕ್ಷ, ನಗರದ ಸಿಸಿ, ಡಾಂಬರು ಮತ್ತಿತರ ರಸ್ತೆಗಳ ಅಭಿವೃದ್ಧಿಗೆ ₹9 ಕೋಟಿ, ರಸ್ತೆ ಪಕ್ಕದ ಚರಂಡಿಗಳ ನಿರ್ಮಾಣಕ್ಕೆ ₹2ಕೋಟಿ ಖರ್ಚನ್ನು ಅಂದಾಜಿಸಲಾಗಿದೆ.
ನಗರದಲ್ಲಿ ಹೊಸ ಬೀದಿದೀಪ ಅಳವಡಿಕೆಗೆ ₹40 ಲಕ್ಷ, ಸಣ್ಣ ಸೇತುವೆ, ಮೋರಿಗಳ ನಿರ್ಮಾಣಕ್ಕಾಗಿ ₹2.20ಕೋಟಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ಯಂತ್ರ, ಸಲಕರಣೆಗಳ ಖರೀದಿಗಾಗಿ ₹3.35ಕೋಟಿ, ಹೊಸದಾಗಿ ಕೊಳವೆಬಾವಿ, ಪೈಪ್ಲೈನ್, ಪಂಪ್ ಮೋಟಾರುಗಳಿಗಾಗಿ ₹3.30ಕೋಟಿ, ಒಳಚರಂಡಿ ಅಭಿವೃದ್ಧಿಗೆ ₹3.50 ಕೋಟಿ, ಪಾರ್ಕ್ ಅಭಿವೃದ್ಧಿಗೆ ₹50 ಲಕ್ಷ, ಎಸ್ಟಿಪಿ ಅಭಿವೃದ್ಧಿಗೆ ₹35 ಲಕ್ಷ ನಿಗದಿಪಡಿಸಲಾಗಿದೆ.
2024-25ನೇ ಸಾಲಿನಲ್ಲಿ ವಿವಿಧ ಉದ್ದೇಶಗಳಿಗಾಗಿ ಸರ್ಕಾರದಿಂದ ₹53.81ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಸಚಿವ ಡಾ.ಎಂ.ಸಿ.ಸುಧಾಕರ್ ಯುಜಿಡಿ ಅಭಿವೃದ್ಧಿಗಾಗಿ ಜಿಲ್ಲೆಗೆ ₹100 ಕೋಟಿ ಮಂಜೂರು ಮಾಡಿಸಿದ್ದು ಅದರಲ್ಲಿ ಚಿಂತಾಮಣಿಗೆ ₹40 ಕೋಟಿ ದೊರೆಯಲಿದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.