ಚಿಂತಾಮಣಿ: ತಾಲ್ಲೂಕಿನ ಕೈವಾರ ಯೋಗಿನಾರೇಯಣ ಮಠದಲ್ಲಿ ಭಾನುವಾರ ಗುರುಪೂಜಾ ಸಂಗೀತೋತ್ಸವಕ್ಕೆ ಚಾಲನೆ ದೊರೆಯಿತು.
ಯತೀಂದ್ರರ ಉತ್ಸವಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಮಠದಿಂದ ಸಂಗೀತೋತ್ಸವದ ಸಭಾಂಗಣಕ್ಕೆ ತರಲಾಯಿತು. ಸಭಾಂಗಣದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ನೇತೃತ್ವದ ತಂಡ ಯತೀಂದ್ರರ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ದೊರೆಯಿತು.
ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರಸ್ವಾಮಿ ವೇದಿಕೆಗಳಲ್ಲಿ ಕಛೇರಿಗಳು ನಡೆದವು. ಒಂದು ವೇದಿಕೆಯಲ್ಲಿ ಒಂದು ತಂಡ ಹಾಡುತ್ತಿದ್ದರೆ ಮತ್ತೊಂದು ವೇದಿಕೆಯಲ್ಲಿ ಮತ್ತೊಂದು ತಡ ಸಿದ್ಧವಾಗಿರುತ್ತಿತ್ತು. ಸಭಾಂಗಣದ ಒಳಗೆ ಹಾಗೂ ಹೊರಗೆ ಜನರು ಕಿಕ್ಕಿರಿದು ಸೇರಿದ್ದರು. ಗ್ರಾಮದ ಬೀದಿ ಬೀದಿಗಳಲ್ಲಿಯೇ ಸಂಗೀತಾಸಕ್ತರು ಕುಳಿತು ಸಂಗೀತದ ರಸದೌತಣವನ್ನು ಸವಿಯುತ್ತಿದ್ದರು.
ನಾದಮಯ ರಾತ್ರಿ: ಇಡೀ ರಾತ್ರಿ ಅನೇಕ ವಿದ್ವಾಂಸರ ಹರಿಕಥೆ, ಬುರ್ರಕಥಾ, ವಿವಿಧ ಕಲಾಶಾಲೆಗಳಿಂದ ಮೂಡಿ ಬಂದ ಭರತನಾಟ್ಯ, ನಾಟಕಗಳನ್ನು ಜನರು ನಿದ್ದೆ ಮರೆತು ಆಸ್ವಾದಿಸಿದರು. ರಾತ್ರಿ ಎಲ್ಲ ಸಂಗೀತದ ಗುಂಗಿನಲ್ಲೇ ಮೈಮರೆತರು.