ಬಾಗೇಪಲ್ಲಿ: ಸಿಐಟಿಯು 51ನೇ ಸಂಸ್ಥಾಪನಾ ದಿನದ ಅಂಗವಾಗಿ ತಾಲ್ಲೂಕಿನಾದ್ಯಾಂತ ಸಿಐಟಿಯು ಮುಖಂಡರು, ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಪಾಲಿಸಿ ತಮ್ಮ ಮನೆ, ಅಂಗಡಿ ಹಾಗೂ ಸಂಘದ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಆಂಜನೇಯ ರೆಡ್ಡಿ ತಿಳಿಸಿದರು.
ಪಟ್ಟಣದ ಆವುಲಮಂದೆ ರಸ್ತೆಯಲ್ಲಿನ ತಮ್ಮ ಸ್ವಗೃಹದ ಮುಂದೆ ಭಾನುವಾರ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಅನೇಕ ಮಂದಿ ಕೂಲಿಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬಗಳು ಬೀದಿ ಪಾಲಾಗಿವೆ. ಊಟಕ್ಕೂ ಪರದಾಡುವಂತೆ ಆಗಿದೆ. ಉದ್ಯೋಗ ಕಡಿತ ಮಾಡಿರುವುದರಿಂದ 15 ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳು ಆಗಿದ್ದಾರೆ. ಲಾಕ್ಡೌನ್ ಸಂಕಷ್ಟದಲ್ಲಿ ಇರುವ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ವಿಶೇಷ ಪ್ಯಾಕೇಜ್ಗಳು ಮೂಗಿಗೆ ತುಪ್ಪ ಸವರಿದಂತೆ ಆಗಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿನ ಮುಂಚೂಣಿಯಲ್ಲಿ ಕೊರೊನಾ ವಾರಿಯರ್ಸ್ ಆಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಭದ್ರತೆ ಕಲ್ಪಿಸಬೇಕು. ಮುಖಗವಸು, ಗ್ಲೌಸುಗಳನ್ನು ವಿತರಣೆ ಮಾಡಬೇಕು. ಹಮಾಲಿಯವರಿಗೆ, ಟೋಲ್ಗೇಟ್, ಬಿಸಿಊಟ, ಗ್ರಾಮ ಪಂಚಾಯಿತಿ ನೌಕರರಿಗೆ ₹10 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ತಾಲ್ಲೂಕು ಮುಖಂಡ ಮುನಿಯಪ್ಪ, ಹಮಾಲಿ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕೃಷ್ಣಪ್ಪ, ಹರೀಶ್, ಧನುಷ್, ಶ್ರೀನಿವಾಸ್ ನಾಯಕ್, ಶಿವಪ್ಪ, ಮಂಜುನಾಥ್, ಲಕ್ಷ್ಮಿನರಸಮ್ಮ ಇದ್ದರು.