ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿ: ಮುಖಂಡರ ಆಗ್ರಹ

ಚಿಕ್ಕಬಳ್ಳಾಪುರ: ಸ್ಥಳೀಯರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಟ್ ಟಿಕೆಟ್ ನೀಡಬೇಕು. ವರಿಷ್ಠರು ನಮ್ಮ ಮನವಿ ಆಲಿಸಬೇಕು ಎಂದು ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಇಲ್ಲಿ ಆಗ್ರಹಿಸಿದರು
ಮುಖಂಡ ವೆಂಕಟಾಚಲ ಮಾತನಾಡಿ, ‘ಸ್ಥಳೀಯರಿಗೆ ಪಕ್ಷವು ಟಿಕೆಟ್ ಕೊಡಬೇಕು. ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ನಮ್ಮ ಕಷ್ಟ ಸುಖಕ್ಕೆ ಸ್ಪಂದಿಸುವರು. ಈ ಹಿಂದಿನಿಂದಲೂ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್ ನಮ್ಮ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅವರಿಂದ ಪಕ್ಷಕ್ಕೂ ಅನುಕೂಲವಾಗಿದೆ’ ಎಂದರು.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹಳ್ಳಿಗಳಲ್ಲಿ ಪಕ್ಷ ಸಂಘಟಿಸಿದ್ದಾರೆ. ಕಷ್ಟ ಎಂದು ಅವರ ಮನೆಗೆ ಹೋದವರಿಗೆ ನೆರವಾಗಿದ್ದಾರೆ ಎಂದರು.
ಶ್ಯಾಮ್ ಅವರ ಜತೆಗೆ ಯಲುವಳ್ಳಿ ರಮೇಶ್, ಗಂಗರೇಕಾಲುವೆ ನಾರಾಯಣಸ್ವಾಮಿ ಟಿಕೆಟ್ಗೆ ಅರ್ಜಿ ಸಲ್ಲಿರುವ ಪ್ರಮುಖರಾಗಿದ್ದಾರೆ. ಹೀಗೆ ಸ್ಥಳೀಯವಾಗಿರುವ ಯಾವುದೇ ಮುಖಂಡರಿಗೆ ಟಿಕೆಟ್ ನೀಡಿದರೂ ಅನುಕೂಲವಾಗುತ್ತದೆ. ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಲಕ್ಷ್ಮಣ್ ಮಾತನಾಡಿ, ಈ ಹಿಂದೆ ಕ್ಷೇತ್ರದಲ್ಲಿ ನಂದಿ ಅಂಜಿನಪ್ಪ ಅವರು ಕಾಂಗ್ರೆಸ್ ಅನ್ನು ಮರವಾಗಿ ಬೆಳೆಸಿದರು. ಆದರೆ ಹಣ್ಣು ತಿಂದವರೇ ಬೇರೆ. ಕಾಂಗ್ರೆಸ್ ಗೆಲ್ಲಲು ಸ್ಥಳೀಯರು ಹಗಲಿರುಳು ಶ್ರಮಿಸಿದ್ದಾರೆ. ಈ ಎಲ್ಲ ದೃಷ್ಟಿಯಿಂದ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದರು.
ವಡ್ಡರೇಪಾಳ್ಯ ಮೂರ್ತಿ ಮಾತನಾಡಿ, ಗ್ರಾ.ಪಂ ಚುನಾವಣೆ, ನಗರಸಭೆ ಚುನಾವಣೆ ಸಮಯದಲ್ಲಿ ವಿನಯ್ ಶ್ಯಾಮ್ ಪಕ್ಷಕ್ಕೆ ದುಡಿದಿದ್ದಾರೆ. ಜನರಿಗೆ ಸ್ಪಂದಿಸಿದ್ದಾರೆ. ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿದರೆ ನಾವು ಅವರ ಪರವಾಗಿ ಕೆಲಸ ಮಾಡಲು ಸಿದ್ಧ ಎಂದು ಹೇಳಿದರು.
ಪೆದ್ದಹಳ್ಳಿ ವೆಂಕಟೇಶಪ್ಪ ಮಾತನಾಡಿ, ಕೋಲಾರ, ಮುಳಬಾಗಿಲಿನಿಂದ ಅಭ್ಯರ್ಥಿಯನ್ನು ತಂದರೆ ಹೇಗೆ? ಅವರು ಇಷ್ಟು ಹಣ ಕೊಡುತ್ತಾರೆ, ಇವರು ಇಷ್ಟು ಹಣ ಕೊಡುತ್ತಾರೆ ಎನ್ನುವುದೇ ಚರ್ಚೆ ಆಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಬೇರೂರಲು ಆರ್.ಎಲ್.ಜಾಲಪ್ಪ, ಅವರ ಕುಟುಂಬ ಸದಸ್ಯರಾದ ಜಿ.ಎಚ್.ನಾಗರಾಜ್, ವಿನಯ್ ಶ್ಯಾಮ್ ಅವರ ಕೊಡುಗೆ ಇದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.