ಚಿಂತಾಮಣಿ: ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಕಳೆದ ಎರಡು ತಿಂಗಳುಗಳಿಂದಲೂ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದವರಿಗೆ ನಗರದ ವಾಸವಿ ಕಲ್ಯಾಣ ಮಂದಿರದಲ್ಲಿ ವಾಸವಿ ಯುವಜನ ಸಂಘದಿಂದ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
‘ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ನಗರದ ಆರ್ಯವೈಶ್ಯ ಮಂಡಳಿಯು ಹಲವಾರು ಸಮಾಜಮುಖಿ ಸೇವೆ ಹಮ್ಮಿಕೊಂಡು ಶ್ಲಾಘನೀಯ ಕೆಲಸ ಮಾಡಿದೆ. ಸೇವೆಯನ್ನು ನೀಡಿದಂತಹ ಕೊರೊನಾ ವಾರಿಯರ್ಗಳನ್ನು ಗೌರವಿಸಲಾಗುತ್ತಿದೆ’ ಎಂದು ಮಂಡಳಿಯ ಗೌರವಾಧ್ಯಕ್ಷ ಪಿ.ಆರ್. ಅಶೋಕ್ ಕುಮಾರ್ ತಿಳಿಸಿದರು.
ಅಧ್ಯಕ್ಷ ವಿ.ಡಿ.ಎಚ್. ಅಶ್ವತ್ಥನಾರಾಯಣ ಮಾತನಾಡಿ, ಮಂಡಳಿಯ ಎಲ್ಲ ಕಾರ್ಯಕ್ರಮಗಳಲ್ಲಿ ಪದಾಧಿಕಾರಿಗಳು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ವಿವಿಧ ರೀತಿಯಲ್ಲಿ ಸೇವೆ ಮಾಡಿದ್ದಾರೆ. ಅನೇಕರು ಕೈಜೋಡಿಸಿ ಕೈಲಾದ ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.
ಯುವಜನ ಸಂಘದ ಗೌರವಾಧ್ಯಕ್ಷ ವಾಸವಿ ಸುರೇಶ್ ಮಾತನಾಡಿ, ಆರ್ಯವೈಶ್ಯ ಮಂಡಳಿಯು ಮನೆಯಲ್ಲಿ ಇರುವ ಸೋಂಕಿತರಿಗೆ, ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ, ನಿರ್ಗತಿಕರಿಗೆ ಹಾಗೂ ಹಗಲಿರುಳು ದುಡಿಯುವ ವೈದ್ಯರು ಮತ್ತು ಸಿಬ್ಬಂದಿಗೆ ಊಟ ಪೂರೈಸಿದೆ. ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೊರೊನಾ ಔಷಧಿ ನೀಡಲಾಗಿದೆ. ದಿನಪತ್ರಿಕೆ ವಿತರಿಸುವ ಹುಡುಗರು, ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.
ದೀನದಯಾಳ್ ಗ್ರಾಮೀಣ ಸಂಸ್ಥೆಯ ಸಹಯೋಗದೊಂದಿಗೆ ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಲಾಗಿದೆ. ಸ್ವಂತ ಕೆಲಸಗಳನ್ನು ಬದಿಗೊತ್ತಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಸಮಾಜದಲ್ಲಿ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಕೋಮಲ್ ಆನಂದ್, ಮಾಕಂ ಕಿರಣ್, ವಿ.ಎಸ್. ಅಂಜನಿ ಕುಮಾರ್, ಎಸ್.ಕೆ. ಮುನಿಸ್ವಾಮಿ, ಧನಪಾಲ್ ರಾಜೇಶ್, ಕೈರುಚಿ ಪ್ರಭಾಕರ್, ಬಿ.ಎಸ್. ಕೋದಂಡರಾಮ್, ಎಸ್.ವಿ. ರಾಮಮೋಹನ್, ಎಂ.ಜಿ. ರಾಮಕೃಷ್ಣ, ಕೆ.ಎ. ರಾಜೇಶ್, ಎಸ್.ವಿ. ಶ್ರೀನಾಥ್, ಪಿ. ಮಹೇಶ್, ಎಸ್.ಕೆ. ಮಹೇಶ್, ಎಸ್.ಎಂ. ಮನೀಶ್, ಧನಪಾಲ್ ರಾಹುಲ್, ಕ್ಯಾಟರಿಂಗ್ ಅಶೋಕ್, ಕೆ.ಎಂ. ಭರತ್, ವೈ.ಎಸ್. ಪ್ರತೀಕ್, ಕೆ.ಎಸ್. ಲಕ್ಷ್ಮಣ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.