ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಆರ್.ಲತಾ ಅವರು ಬುಧವಾರ ನಗರದ 10ನೇ ವಾರ್ಡ್ಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಜತೆಗೆ ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಲತಾ, ‘ನಗರದಾದ್ಯಂತ ನಗರಸಭೆ ಸಿಬ್ಬಂದಿ ಎಲ್ಲಾ ರಸ್ತೆಗಳಲ್ಲಿ ಹಾಗೂ ಚರಂಡಿಗಳು, ಮನೆ-ಮನೆಗಳಿಂದ ಸಕಾಲಕ್ಕೆ ಕಸ ಸಂಗ್ರಹಣೆಯಾಗುವಂತೆ ನೋಡಿಕೊಳ್ಳಬೇಕು. ಹಸಿ ಕಸ ಒಣ ಕಸ ವಿಂಗಡನೆ, ಹೋಟೆಲ್ಗಳ ಶುಚಿತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
‘ಪ್ರತಿದಿನ ಒಂದೊಂದು ವಾರ್ಡ್ಗೆ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಇದರಿಂದ ನಗರವನ್ನು ಸ್ವಚ್ಚವಾಗಿಡಲು ಹಾಗೂ ಕೊರೋನಾದಂತಹ ಮಹಾಮಾರಿಯನ್ನು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಅವರು ವಾರ್ಡ್ ನಂಬರ್ 10ರ ಒಂದು ಬಟ್ಟೆ ಅಂಗಡಿಯ ಮುಂದೆ ಕೊರೊನಾ ಬಗ್ಗೆ ಅರಿವು ಮೂಡಿಸುವ ಬ್ಯಾನರ್ ಅಳವಡಿಸದ ಕಾರಣಕ್ಕೆ ಅಂಗಡಿಯನ್ನು ಮುಚ್ಚಿಸಿದರು. ಮುಂದಿನ ದಿನಗಳಲ್ಲಿ ಇದೇ ರೀತಿ ತಪ್ಪು ಮಾಡಿದರೆ ಕಾನೂನಿನ ರೀತಿಯಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಅಪ್ಪಯ್ಯ ಕುಂಟೆ ಅಭಿವೃದ್ಧಿ ಕಾರ್ಯವನ್ನು ಪರಿಶೀಲಿಸಿದರು.
ಜಿಲ್ಲಾ ನಗರಾಭಿವೃದ್ಧಿ ಆಯುಕ್ತ ಡಾ.ಭಾಸ್ಕರ್, ಜಿಲ್ಲಾ ನಗರಾಭಿವೃದ್ಧಿ ಯೋಜನ ನಿರ್ದೇಶಕಿ ರೇಣುಕಾ, ನಗರಸಭೆ ಆಯುಕ್ತ ಲೋಹಿತ್, ವಾರ್ಡ್ ಸದಸ್ಯರು, , ಆರೋಗ್ಯ ನಿರೀಕ್ಷಕರು, ನೋಡಲ್ ಅಧಿಕಾರಿಗಳು, ಸ್ವಚ್ಛತಾ ಕ್ಯಾಪ್ಟನ್ ಹಾಜರಿದ್ದರು.