ಗೌರಿಬಿದನೂರು: ತಾಲ್ಲೂಕಿನ ದ್ಯಾವಗಾನಹಳ್ಳಿಯ ವಿಜೇಂದ್ರ (16) ಅಪಹರಣಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಾಳ್ಯಂ ದಾಮೋದರಂ (34), ಮುತ್ತುಶೆಟ್ಟಿ ಮಣಿಕುಮಾರ್ (43), ಶೇಖ್ ಬಾಷಾ (45), ಲೋಕೇಶ್ ಕುಮಾರ್ (36) ಬಂಧಿತರು. ಎಲ್ಲರೂ ಆಂಧ್ರಪ್ರದೇಶದವ ರಾಗಿದ್ದಾರೆ.
ಆರೋಪಿಗಳು ದ್ಯಾವಗಾನ ಹಳ್ಳಿಯ ಚೌಡಮ್ಮನ ಮನೆಗೆ ಕಾರಿನಲ್ಲಿ ಬಂದು ಅವರ ಪತಿಯ ಬಗ್ಗೆ ವಿಚಾರಿಸಿದ್ದರು. ಅವರು ಹೊಲದಲ್ಲಿ ಇದ್ದಾರೆ ಎಂದು ಚೌಡಮ್ಮ ತಿಳಿಸಿದ್ದರು. ಅಲ್ಲದೆ ಹೊಲ ತೋರಿಸುವಂತೆ ತನ್ನ ಮಗ ವಿಜೇಂದ್ರನನ್ನು ಆರೋಪಿಗಳ ಜತೆ ಚೌಡಮ್ಮ ಕಳುಹಿಸಿದ್ದರು.
ಆದರೆ, ಮಗ ಸಂಜೆಯವರೆಗೂ ಮನೆಗೆ ಬರಲಿಲ್ಲ. ನಂತರ ಚೌಡಮ್ಮ ಅವರ ಮನೆಗೆ ಕರೆ ಮಾಡಿದ ಆರೋಪಿಗಳು ನಿಮ್ಮ ಮಗನನ್ನು ಅಪಹರಣ ಮಾಡಿದ್ದೇವೆ. ₹ 2.5 ಲಕ್ಷ ನೀಡಿದರೆ ಸುರಕ್ಷಿತವಾಗಿ ಬಿಡುತ್ತೇವೆ. ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿದ್ದರು. ಅಪಹರಣ ಸಂಬಂಧ ವಿಜೇಂದ್ರನ ತಾಯಿ ಚೌಡಮ್ಮ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಗ್ರಾಮಾಂತರ ಪಿಎಸ್ಐ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ 3 ತಂಡ ರಚಿಸಲಾಗಿತ್ತು. ಆರೋಪಿಗಳು ತಿರುಪತಿಯಲ್ಲಿ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿದರು.