ಚಿಕ್ಕಬಳ್ಳಾಪುರ: ನವದೆಹಲಿಯ ನಿಜಾಮುದ್ದೀನ್ನಲ್ಲಿ ಕಳೆದ ತಿಂಗಳು ನಡೆದ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗೌರಿಬಿದನೂರಿನ 23 ವರ್ಷದ ಯುವಕನೊಬ್ಬನಿಗೆ ಕೋವಿಡ್ 19 ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿ, ಜನರಲ್ಲಿ ತಲ್ಲಣ ಹೆಚ್ಚಿಸಿದೆ. ಸದ್ಯ, ಯುವಕನನ್ನುಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ರೂಪಿಸಿರುವ ವಿಶೇಷಕೋವಿಡ್ ವಾರ್ಡ್ಗೆದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಯುವಕನ ತಾಯಿ, ಸ್ನೇಹಿತ, ಅಕ್ಕ, ಭಾವ ಮತ್ತವರ ಇಬ್ಬರು ಮಕ್ಕಳನ್ನು ಕ್ವಾರಂಟೈನ್ಗೆ ಒಳಪಡಿಸಿ, ನಿಗಾ ವಹಿಸಲಾಗಿದೆ.
ಈ ಮೊದಲು ಮೆಕ್ಕಾ ಯಾತ್ರೆ ಕೈಗೊಂಡಿದ್ದ ಗೌರಿಬಿದನೂರಿನ ನಾಲ್ಕು ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಈ ಪೈಕಿ ಮಾರ್ಚ್ 25 ರಂದು 75 ವಯೋಮಾನದ ವೃದ್ದೆಯೊಬ್ಬರು ಮೃತಪಟ್ಟಿದ್ದರು. ಸೋಂಕಿತರ ಸಂಪರ್ಕಕ್ಕೆ ಬಂದವರ ಪೈಕಿ ಆರು ಜನರಿಗೆ ಸೋಂಕು ತಗುಲಿತ್ತು.