ಗುಡಿಬಂಡೆ: ಮುಂಗಾರು ಹಂಗಾಮಿಗೆ ಸರ್ಕಾರದಿಂದರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ಪೂರೈಕೆಯಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ರೈತರು ಬಿತ್ತನೆ ಬೀಜ ಪಡೆಯಬಹುದು ಎಂದು ಉಪ ಕೃಷಿ ನಿರ್ದೇಶಕ ಚಂದ್ರಕುಮಾರ್ ತಿಳಿಸಿದರು.
ತಾಲ್ಲೂಕಿನ ಗುಮ್ಮರೆಡ್ಡಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಉಚಿತ ಪ್ರಾತ್ಯಕ್ಷಿಕೆ, ಶೇಂಗಾ ಬಿತ್ತನೆ ಬೀಜ ವಿತರಣೆ ಹಾಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಕಾರ್ಯವನ್ನು ಶುರು ಮಾಡಿದ್ದಾರೆ. ಸೋಮೇನಹಳ್ಳಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜನೀಡಲಾಗುತ್ತಿದೆ ಎಂದರು.
324 ಮೆಟ್ರಿಕ್ ಟನ್ನಷ್ಟು ರಸಗೊಬ್ಬರ ದಾಸ್ತಾನು ಮಾಡಿದ್ದು, ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ಏರಿಕೆ ಮಾಡಿದೆ. ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಮೋಸವಾಗದಂತೆ ಮಾರಾಟಗಾರರಿಗೆ ಪಿಒಎಸ್ ಮಿಷನ್ಗಳನ್ನು ನೀಡಿದ್ದು, ರೈತರು ಆ ಮಿಷನ್ಗಳ ಮೂಲಕ ರಸೀದಿಗಳನ್ನು ಕೇಳಿ ಪಡೆದುಕೊಳ್ಳಬೇಕು. ಗುಮ್ಮರೆಡ್ಡಿಹಳ್ಳಿ ಗ್ರಾಮದಲ್ಲಿ ಶೇಂಗಾ ಬಿತ್ತನೆ ಬೀಜಗಳ ಮಿನಿಕಿಟ್ ನೀಡಿದ್ದು, ಮೊದಲ ಹಂತದಲ್ಲಿ 25 ಬ್ಯಾಗ್ ಎರಡನೇ ಹಂತದಲ್ಲಿ 75 ಬ್ಯಾಗ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗುವುದು ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದರು.
ತಹಶೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ. ಇ.ಒ ರವೀಂದ್ರ, ಸಹಾಯಕ ಕೃಷಿ ಅಧಿಕಾರಿ ಅನೀಸ್ ಸಲ್ಮಾ, ತಾಂತ್ರಿಕ ಕೃಷಿ ಅಧಿಕಾರಿ ಎನ್.ಶಂಕರಯ್ಯ, ಬೈರಾರೆಡ್ಡಿ, ಅಶ್ವತ್ಥರೆಡ್ಡಿ, ಕೃಷ್ಣೇಗೌಡ ಇದ್ದರು.