ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೂ ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರಿ ಮಳೆ ಸುರಿಯಿತು.
ಸೋಮವಾರ ರಾತ್ರಿ 7.30ರಿಂದ ಮತ್ತೆ ಮಳೆ ಆರಂಭವಾಯಿತು. ರಾತ್ರಿಯವರೆಗೂ ಉತ್ತಮ ಮಳೆ ಸುರಿಯಿತು.
ಜಿಲ್ಲೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೋಡಿ ನೀರು ಹರಿಯುತ್ತಿರುವ ಸುತ್ತಲಿನ ಹೊಲಗಳು ಜಲಾವೃತವಾಗಿವೆ.
ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಕೆರೆ, ಕಟ್ಟೆಗಳು, ಚೆಕ್ಡ್ಯಾಂಗಳು ತುಂಬಿವೆ. ಯಾವ ಹಳ್ಳಿಗಳಲ್ಲಿ ನೋಡಿದರೂ ನೀರು ತುಂಬಿ ತುಳುಕುತ್ತಿದೆ.