ಚಿಕ್ಕಬಳ್ಳಾಪುರ: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಗಳನ್ನು ಮತ್ತಷ್ಟು ಸುಲಭ ಮತ್ತು ಸರಳವಾಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ‘ಕಾವೇರಿ 2.0’ ತಂತ್ರಾಂಶ ಪರಿಚಯಿಸಿದೆ. ಜೂನ್ 20ರ ಒಳಗೆ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಂತ್ರಾಂಶ ಅನುಷ್ಠಾನಗೊಳ್ಳಲಿದೆ ಎಂದು ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಇಲಾಖೆ ಆಯುಕ್ತರಾದ ಬಿ.ಆರ್.ಮಮತಾ ತಿಳಿಸಿದರು.
ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶನಿವಾರ ‘ಕಾವೇರಿ ತಂತ್ರಾಂಶ 2.0’ ಅಡಿ ನೋಂದಣಿ ಮಾಡಿಕೊಂಡ ಫಲಾನುಭವಿಗೆ ದಸ್ತಾವೇಜು ವಿತರಿಸುವ ಮೂಲಕ ‘ಕಾವೇರಿ ತಂತ್ರಾಂಶ 2.0’ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಸ್ತಿ ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ವಿಳಂಬ ತಪ್ಪಿಸಲು ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಸಾರ್ವಜನಿಕರೇ ಆನ್ಲೈನ್ ಮೂಲಕ ಸುಲಭ ಮತ್ತು ಸರಳ ನೋಂದಣಿ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಕಾವೇರಿ 2.0 ತಂತ್ರಾಂಶ ಹೆಚ್ಚು ಅನುಕೂಲವಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂತ್ರಾಂಶವನ್ನು ಅಳವಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ನೋಂದಣಿಗೆ ಬರುವ ಸಾರ್ವಜನಿಕರು ಮೊದಲೇ ಸಮಯ ನಿಗದಿ ಮಾಡಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ಕೆಲವೇ ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದಸ್ತಾವೇಜುಗಳನ್ನು ಪಡೆಯಬಹುದು ಎಂದರು.
ಜಿಲ್ಲೆಯ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿಯೂ ಏ.11 ರೊಳಗಾಗಿ ತಂತ್ರಾಂಶದ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಕರಾರು ಮತ್ತು ಉಯಿಲು (ವಿಲ್) ಸೇರಿ ನಾನಾ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಾಪತ್ರಯ ಇರುವುದಿಲ್ಲ. ‘ಕಾವೇರಿ -2’ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದು ಎಂದರು.
ಸಾರ್ವಜನಿಕರು ಹೆಚ್ಚಿನ ವಿವರಗಳಿಗೆ ಜಾಲತಾಣ https://kaveri.karnataka.gov.in, https://igr.karnataka.gov.in ಅಥವಾ ಸಹಾಯವಾಣಿ 080-68265316 ಸಂಪರ್ಕಿಸಿ ಈ ತಂತ್ರಾಂಶದ ಅನುಕೂಲ ಪಡೆಯಬಹುದು ಎಂದು
ಹೇಳಿದರು.
ಚಿಂತಾಮಣಿಯಲ್ಲಿ ಏ.3, ಗೌರಿಬಿದನೂರು ಏ.5, ಬಾಗೇಪಲ್ಲಿ ಏ.6, ಶಿಡ್ಲಘಟ್ಟ ಏ.10, ಗುಡಿಬಂಡೆಯಲ್ಲಿ ಏ.11 ರಂದು ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.
ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.